ಮನೆ ಹಕ್ಕು ಪತ್ರಕ್ಕೆ ಲಂಚ ಕೇಳಿದ ಆರೋಪ: ಶೃಂಗೇರಿ ತಹಶೀಲ್ದಾರ್ ಬಂಧನ
ಎಸಿಬಿ ಕಾರ್ಯಾಚರಣೆ
ತಹಶೀಲ್ದಾರ್ ಅಂಬುಜಾ
ಚಿಕ್ಕಮಗಳೂರು, ಜ.6: ಮನೆಯ ಹಕ್ಕುಪತ್ರ ನೀಡಲು ವ್ಯಕ್ತಿಯೊಬ್ಬರಿಗೆ 60 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ಸಂಬಂಧ ಗುರುವಾರ ಎಸಿಬಿ ಅಧಿಕಾರಿಗಳ ತಂಡ ಶೃಂಗೇರಿ ಪಟ್ಟಣದ ಐಬಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಗ್ರಾಮಲೆಕ್ಕಾಧಿಕಾರಿ ಸಿದ್ದಪ್ಪ ಎಂಬವರನ್ನು ಬಂಧಿಸಿದ್ದ ಅಧಿಕಾರಿಗಳ ತಂಡ ಪ್ರಕರಣ ಸಂಬಂಧ ಶೃಂಗೇರಿ ತಹಶೀಲ್ದಾರ್ ಅಂಬುಜಾ ಅವರನ್ನೂ ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ತನ್ನ ಮನೆಯ ಹಕ್ಕುಪತ್ರಕ್ಕಾಗಿ ಸಂಜಯ್ಕುಮಾರ್ ಎಂಬವರು ತಹಶೀಲ್ದಾರ್ ಅವರಿಗೆ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದ್ದು, ಹಕ್ಕುಪತ್ರ ನೀಡಲು ತಹಶೀಲ್ದಾರ್ ಅಂಬುಜಾ ಅವರು 60 ಸಾವಿರ ರೂ. ಲಂಚ ನೀಡಬೇಕೆಂದು ಬೇಡಿಕೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಂತ್ರಸ್ಥ ಸಂಜಯ್ಕುಮಾರ್ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದು, ಗುರುವಾರ ಶೃಂಗೇರಿ ಪಟ್ಟಣ ಐಬಿ ಕಚೇರಿಯಲ್ಲಿ ಎಸಿಬಿ ತಂಡ ಕಾರ್ಯಾಚರಣೆ ನಡೆಸಿದ್ದ ವೇಳೆ ಗ್ರಾಮಾ ಲೆಕ್ಕಾಧಿಕಾರಿ ಸಿದ್ದಪ್ಪ ಅವರು ಲಂಚದ ಹಣದೊಂದಿಗೆ ಎಸಿಬಿ ಬಲೆಗೆ ಬಿದ್ದಿದ್ದರು.
ಈ ಪ್ರಕರಣದಲ್ಲಿ ತಹಶೀಲ್ದಾರ್ ಭಾಗಿಯಾಗಿರುವ ಬಗ್ಗೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಶೃಂಗೇರಿ ತಹಶೀಲ್ದಾರ್ ಅಂಬುಜಾ ಅವರನ್ನು ಪಟ್ಟಣದ ಐಬಿಯಲ್ಲೇ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಸಂಜೆಯಿಂದ ರಾತ್ರಿವರೆಗೆ ಸುಮಾರು 4 ಗಂಟೆಗಳ ವಿಚಾರಣೆ ಬಳಿಕ ತಹಶೀಲ್ದಾರ್ ಕೂಡ ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಂಬುಜಾ ಅವರನ್ನೂ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹದಳದ ಉಪಾಧೀಕ್ಷಕರ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.