ಭದ್ರಾವತಿ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆದರಿಕೆ ಆರೋಪ; ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
ಶಿವಮೊಗ್ಗ,ಜ.11: ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಹೊಟೇಲ್ ಸಿಬ್ಬಂದಿಯೋರ್ವ ಅತ್ಯಾಚಾರವೆಸಗಿ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ.
ಉಮೇಶ್ (28), ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪಿಯಾಗಿದ್ದು, ಭದ್ರಾವತಿ ಪಟ್ಟಣ ಸಮೀಪದ ಗ್ರಾಮವೊಂದರ ಹೊಟೇಲ್ನ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಪ್ರಕರಣ ಹಿನ್ನೆಲೆ:
ಉಮೇಶ್ ಕೆಲಸಮಾಡುತ್ತಿದ್ದ ಹೊಟೇಲ್ನಲ್ಲಿ ಮಹಿಳೆಯೊಬ್ಬರು ಕೆಲಸ ಮಾಡುತ್ತಿದ್ದರು. ಆ ಮಹಿಳೆಯ ಮಗಳು ಆಗಾಗ ಹೊಟೇಲ್ಗೆ ಬಂದು ಹೋಗುತ್ತಿದ್ದಳು. ಆಕೆಯನ್ನು ಪರಿಚಯಿಸಿಕೊಂಡ ಉಮೇಶ್, ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.
ಸೋಮವಾರ ಬೆಳಗ್ಗೆ ಅಪ್ರಾಪ್ತೆಯು ಶಾಲೆಗೆ ತೆರಳುತ್ತಿದ್ದಳು. ಈ ಸಂದರ್ಭ ಉಮೇಶ್, ಆಕೆಯನ್ನು ಪುಸಲಾಯಿಸಿ, ಭದ್ರಾವತಿಯಿಂದ ಬಸ್ಸಿನಲ್ಲಿ ತರೀಕೆರೆಗೆ ಕರೆದೊಯ್ದಿದ್ದಾನೆ. ಅಲ್ಲಿ ಲಾಡ್ಜ್ ಒಂದರಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ ಈ ವಿಚಾರ ಹೊರಗೆ ಗೊತ್ತಾದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಪೇಪರ್ ಟೌನ್ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.