ನಾನು ಸಿಎಂ ಸ್ಥಾನದ ಆಕಾಂಕ್ಷಿಯಲ್ಲ, ಸಹಕಾರ ಸಚಿವನಾಗಿರುವುದೇ ನನ್ನ ಅದೃಷ್ಟ ಎಂದ ಎಸ್.ಟಿ.ಸೋಮಶೇಖರ್
ಮೈಸೂರು,ಜ.20: 'ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ, ಸಹಕಾರ ಸಚಿವನಾಗಿರುವುದೇ ನನ್ನ ಅದೃಷ್ಟ, ರಾಜ್ಯಧ್ಯಾಕ್ಷ ನಳೀನ್ ಕುಮಾರು ಕಟೀಲ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವುದು ಪಕ್ಷ ಸಂಘಟನೆಗಾಗಿ ಹೊರತು ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ' ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಗರದ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಪಕ್ಷದ ಸಂಘಟನೆಗಾಗಿ ಮೂರು ತಿಂಗಳಿಗೊಮ್ಮೆ ಪಕ್ಷದ ರಾಜ್ಯಧ್ಯಕ್ಷರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಯಾಗುವುದು ಸಹಜ. ಅದರಂತೆ ನಾನು ರಾಜ್ಯಧ್ಯಕ್ಷರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೇನೆ ಹೊರತು ಬೇರೆನೂ ಇಲ್ಲ. ಹಾಗಾಗಿ ಇದಕ್ಕೆ ಬೇರೆ ರೀತಿ ಅರ್ಥ ಕಲ್ಪಿಸುವುದು ಸರಿಯಲ್ಲ' ಎಂದು ಹೇಳಿದರು.
''ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ಸಂಪುಟದಲ್ಲಿ ಬದಲಾವಣೆಗಳು ಆಗಲಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದರೆ ಅದಕ್ಕೆ ಉತ್ತರಿಸುತ್ತಿದ್ದೆ, ನಾನು ಮುಖ್ಯಮಂತ್ರಿ ಸಂಪುಟದಲ್ಲಿ ಸಾಮಾನ್ಯ ಸಹಕಾರ ಸಚಿವ, ನೀವು ರಾಜ್ಯದು ಕೇಳಿದರೆ ಮುಖ್ಯಮಂತ್ರಿಗಳ ಕುರಿತು ಕೇಳಿದರೆ ಅಸಹಾಯಕ'' ಎಂದು ಹೇಳಿದರು.