ಟಿಪ್ಪು ಸುಲ್ತಾನ್ ರನ್ನು ಹಾಡಿ ಹೊಗಳಿ ದೊಡ್ಡ ಗ್ರಂಥ ರಚಿಸಿದ್ದು ಬಿಜೆಪಿ ಸರ್ಕಾರ: ಸಿದ್ದರಾಮಯ್ಯ
ಸಚಿವ ಸುನೀಲ್ ಕುಮಾರ್ ಗೆ ತಿರುಗೇಟು ನೀಡಿದ ಮಾಜಿ ಸಿಎಂ
ಬೆಂಗಳೂರು: ''ನಾನು ಮುಖ್ಯಮಂತ್ರಿಯಾಗಿದ್ದಾಗ 2014ರಲ್ಲಿ ಗಣರಾಜ್ಯೋತ್ಸವದ ಪರೇಡ್ ಗೆ ಟಿಪ್ಪು ಸುಲ್ತಾನ್ ಸ್ತಬ್ಧಚಿತ್ರ ಕಳಿಸಿದ್ದು ನಿಜ. ಆ ಟಿಪ್ಪು ಸ್ತಬ್ಧ ಚಿತ್ರಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿದ್ದು ಕೂಡಾ ನಿಜ. ಸುನೀಲ್ ಕುಮಾರ್ ಅವರಂತಹ ಟಿಪ್ಪು ವಿರೋಧಿಗಳು ಯಾಕೆ ಆಗ ಅದನ್ನು ವಿರೋಧಿಸಲಿಲ್ಲ?'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಟಿಪ್ಪು ಸುಲ್ತಾನ್ ಅವರನ್ನು ಹಾಡಿ ಹೊಗಳಿ ದೊಡ್ಡ ಗ್ರಂಥವನ್ನೇ ರಚಿಸಿದ್ದು ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ. ಅದನ್ನು ಪ್ರಕಟಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೇರೆಯವರ ಮೇಲೆ ಆರೋಪಿಸಲು ದೊಡ್ಡಬಾಯಿ ಬಿಡುವ ಸುನೀಲ್ ಕುಮಾರ್ ಆಗ ಬಾಯಿ ಮುಚ್ಚಿಟ್ಟುಕೊಂಡಿದ್ದು ಯಾಕೆ?'' ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರವೇ ಪ್ರಕಟಿಸಿದ್ದ ಟಿಪ್ಪು ಸುಲ್ತಾನ್ ಕುರಿತ ಗ್ರಂಥ ಈಗಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗ್ರಂಥಾಲಯದಲ್ಲಿದೆ. ಈ ಗ್ರಂಥ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈಗ ಸಚಿವರಾಗಿರುವ ಸುನೀಲ್ ಕುಮಾರ್ ಗಮನಕ್ಕೆ ಇನ್ನೂ ಬಂದಿಲ್ಲವೇ? ಯಾಕೆ ಈ ಆತ್ಮವಂಚನೆ? ಎಂದು ಕಿಡಿಗಾರಿದ್ದಾರೆ.
''2017ರಲ್ಲಿ ಕರ್ನಾಟಕ ವಿಧಾನಮಂಡಲದ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟಿಪ್ಪು ಸುಲ್ತಾನ್ ಅವರನ್ನು ಸ್ವಾತಂತ್ರ್ಯಯೋಧ ಎಂದು ಹಾಡಿ ಹೊಗಳಿದ್ದಾಗ ಸುನೀಲ್ ಕುಮಾರ್ ಮತ್ತು ಬಿಜೆಪಿ ನಾಯಕರು ಎಲ್ಲಿ ಅಡಗಿಕೊಂಡಿದ್ದರು? ನಾರಾಯಣ ಗುರು ಸ್ತಬ್ಧಚಿತ್ರದ ವಿವಾದ ಹುಟ್ಟಿಕೊಂಡ ದಿನದಿಂದ ನರೇಂದ್ರ ಮೋದಿ ಅವರ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಸುಳ್ಳುಗಳ ಮೂಟೆ ಉರುಳಿಸುತ್ತಿರುವ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಪ್ರಹ್ಲಾದ ಜೋಷಿಯಂತಹವರು ನಾರಾಯಣ ಗುರುಗಳನ್ನು ತಾವು ಒಪ್ಪುವುದಿಲ್ಲ ಎಂಬ ಒಂದು ಸತ್ಯವನ್ನು ಯಾಕೆ ಹೇಳಬಾರದು'' ಎಂದರು.
''ನಾರಾಯಣ ಗುರುಗಳು ನನ್ನ ಸೈದ್ಧಾಂತಿಕ ಗುರುಗಳು. ಆ ಗೌರವದ ಕಾರಣಕ್ಕಾಗಿಯೇ ನಾನು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ನಾರಾಯಣ ಗುರುಗಳ ಜಯಂತಿಯನ್ನು ರಾಜ್ಯ ಸರ್ಕಾರವೇ ಅಧಿಕೃತವಾಗಿ ಆಚರಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೆ. ಇದರಿಂದಾಗಿ ಗುರುಗಳ ಸಂದೇಶ ಮನೆಮನೆಗಳನ್ನು ಮುಟ್ಟುವಂತಾಗಿದೆ'' ಎಂದು ತಿಳಿಸಿದರು.
ಟಿಪ್ಪು ಸುಲ್ತಾನ್ ಮಾತ್ರವಲ್ಲ ಸಮಸಮಾಜಕ್ಕಾಗಿ ಹೋರಾಟ ನಡೆಸಿದ್ದ ಮನುಷ್ಯಪ್ರೇಮಿಗಳೆಲ್ಲರೂ ನನಗೆ ಆದರ್ಶಪ್ರಾಯರು. ಮುಖ್ಯಮಂತ್ರಿಯಾಗಿ ನಾನು ಈ ಮಹಾಪುರುಷರ ಚಿಂತನೆಗೆ ಸರ್ಕಾರದ ಯೋಜನೆಗಳ ರೂಪಕೊಟ್ಟು ಅನುಷ್ಠಾನಗೊಳಿಸಿದ್ದೆ. ನಾನು ಬಿಜೆಪಿ ನಾಯಕರಂತೆ ಆತ್ಮವಂಚಕನಲ್ಲ ಎಂದು ಹೇಳಿದರು.
ಈ ಹಿಂದೆ @BJP4Karnataka ಸರ್ಕಾರವೇ ಪ್ರಕಟಿಸಿದ್ದ ಟಿಪ್ಪು ಸುಲ್ತಾನ್ ಕುರಿತ ಗ್ರಂಥ ಈಗಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗ್ರಂಥಾಲಯದಲ್ಲಿದೆ. ಈ ಗ್ರಂಥ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈಗ ಸಚಿವರಾಗಿರುವ @karkalasunil ಗಮನಕ್ಕೆ ಇನ್ನೂ ಬಂದಿಲ್ಲವೇ? ಯಾಕೆ ಈ ಆತ್ಮವಂಚನೆ?
— Siddaramaiah (@siddaramaiah) January 21, 2022
4/8#BJPHatesNarayanaguru pic.twitter.com/3oSs0r1AHr