'ನನ್ನ ವಿಜಯನಗರ ಜಿಲ್ಲೆಯ ಜನತೆ ದುಃಖದಲ್ಲಿದ್ದಾರೆ': ಜಿಲ್ಲಾ ಉಸ್ತುವಾರಿ ಬದಲಾವಣೆಗೆ ಸಚಿವ ಆನಂದ್ ಸಿಂಗ್ ಅಸಮಾಧಾನ
ಕೊಪ್ಪಳ, ಜ. 26: `ಕೊಪ್ಪಳ ಜಿಲ್ಲೆಯ ಜನತೆ ಇಂದು ಸಂತೋಷದಲ್ಲಿದ್ದರೆ, ನನ್ನ ವಿಜಯನಗರ ಜಿಲ್ಲೆಯ ಜನತೆ ದುಃಖದಲ್ಲಿದ್ದಾರೆ' ಎಂದು ಪ್ರವಾಸೋದ್ಯಮ ಮತ್ತು ಪರಿಸರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆನಂದ್ ಸಿಂಗ್ , ತಮಗೆ ವಿಜಯನಗರ ಜಿಲ್ಲಾ ಉಸ್ತುವಾರಿ ಕೈತಪ್ಪಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಒಂದು ಸಂತೋಷ ಎಂದರೆ ನಾನು ಕೊಪ್ಪಳ ಜಿಲ್ಲೆಯ ಪಕ್ಕದಲ್ಲೇ ಇದ್ದೀನಿ. ಸಚಿವೆ ಶಶಿಕಲಾ ಜೊಲ್ಲೆ ಅವರು ಕೋವಿಡ್ ಪಾಸಿಟಿವ್ ಬಂದ ಕಾರಣ ಕಾರ್ಯಕ್ರಮಕ್ಕೆ ಬಂದಿಲ್ಲ. ವಿಜಯನಗರದಲ್ಲಿ ಕೆಲ ಕಟ್ಟಡ ಉದ್ಘಾಟನೆ ಮಾಡಬೇಕೆಂದಿದ್ದೇನೆ. ನನಗೆ ಸಂತೋಷ ಇದೆ' ಎಂದು ಹೇಳಿದರು.
`ಇಡೀ ರಾಜ್ಯದಲ್ಲಿ ಉಸ್ತುವಾರಿ ಸಚಿವರುಗಳ ಬದಲಾವಣೆಯಾಗಿದೆ. ಬಹಳಷ್ಟು ಜನರಲ್ಲಿ ಉಸ್ತುವಾರಿ ಬದಲಾವಣೆ ಪ್ರಶ್ನೆ ಇದ್ದು, ನಮ್ಮಲ್ಲೂ ಈ ಬಗ್ಗೆ ಪ್ರಶ್ನೆ ಇದೆ. ತವರು ಜಿಲ್ಲೆ ಉಸ್ತುವಾರಿಗಳನ್ನು ಬೇರೆ ಬೇರೆ ಜಿಲ್ಲೆಗೆ ಹಾಕಿದ್ದು, ಇದು ನನ್ನ ರಾಜಕೀಯ ಜೀವನದ ಅನುಭವದಲ್ಲೇ ಮೊದಲು' ಎಂದು ಆನಂದ್ ಸಿಂಗ್, ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಆಕ್ಷೇಪಿಸಿದರು.
`ಈ ಹಿಂದೆ ನಾನು ನನಗೆ ಮಂತ್ರಿ ಬೇಡ ಜಿಲ್ಲೆ ಕೊಡಿ ಎಂದು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಕೇಳಿದ್ದೆ. ಯಡಿಯೂರಪ್ಪ ಬಹಳ ಬೇಗ ಆವೇಶಕ್ಕೆ ಬಂದು ಬಿಡುತ್ತಾರೆ. ನಾನು ಧೈರ್ಯ ಮಾಡಿ ವಿಜಯನಗರ ಜಿಲ್ಲೆ ಮಾಡಿಕೊಡಿ ಎಂದು ಕೇಳಿದ್ದೆ. ಸಿಟ್ಟಿನಿಂದ ಯಡಿಯೂರಪ್ಪ ಮಾಡುತ್ತೇವೆ ನಿಲ್ಲಿ ಎಂದು ಗದರಿದ್ದರು. ಜಿಲ್ಲೆ ಆಗದೇ ಹೋಗಿದ್ದರೆ ನಾನು ಮತ್ತೆ ರಾಜೀನಾಮೆ ಕೊಡುತ್ತೇನೆಂದು ಬಿಎಸ್ವೈ ಅವರಿಗೆ ಹೇಳಿದ್ದೆ' ಎಂದು ವಿಜಯನಗರ ಜಿಲ್ಲೆ ರಚನೆ ಕುರಿತು ನೆನಪು ಮಾಡಿಕೊಂಡರು.