ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆ: ಬಾಗಲಕೋಟೆ ವೈದ್ಯ ಚಿದಾನಂದ ಎರಡು ವಿಷಯಗಳಲ್ಲಿ ದೇಶಕ್ಕೆ ಪ್ರಥಮ
ಡಾ. ಚಿದಾನಂದ ಕುಂಬಾರ
ಬೆಂಗಳೂರು, ಫೆ.2: 2021ರ ಸಾಲಿನ ನೀಟ್(NEET) ಸೂಪರ್ ಸ್ಪೆಷಾಲಿಟಿ ಪರೀಕ್ಷೆಯ ಎರಡು ವಿಷಯದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿಯ ಡಾ. ಚಿದಾನಂದ ಕುಂಬಾರ ಅವರು ದೇಶಕ್ಕೆ ಪ್ರಥಮ ರ್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ.
ಡಾ.ಚಿದಾನಂದ ಕುಂಬಾರ ಅವರು ನೀಟ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ಡಿಎಂ ಗ್ಯಾಸೋಯೆಂಟರಾಲಾಜಿ(ಡೈಜೆಸ್ಟಿವ್ ಸಿಸ್ಟಂ) ಹಾಗೂ ಡಿಎಂ ಹೆಪಟಾಲಜಿ(ಲಿವರ್ ಸ್ಪೆಷಲಿಸ್ಟ್) ಎರಡೂ ವಿಭಾಗದಲ್ಲಿ ದೇಶಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. ನೀಟ್ ಪಿಜಿ ಪರೀಕ್ಷೆಯಲ್ಲಿ ಒಟ್ಟು 759 ಅಂಕಗಳನ್ನು ಗಳಿಸಿದ್ದಾರೆ.
ನನ್ನ ತಂದೆ ಒಬ್ಬ ರೈತ. ನಾನೊಬ್ಬ ರೈತನ ಮಗ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆಯಿದೆ. ನನ್ನ ತಂದೆಯ ಸಹಕಾರ, ಕುಟುಂಬಸ್ಥರ ಪ್ರೋತ್ಸಾಹದಿಂದ ನಾನು ವೈದ್ಯಕೀಯ ಕ್ಷೇತ್ರಕ್ಕೆ ಬಂದು ಇಂತಹ ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತು. ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಡಾ. ಚಿದಾನಂದ ಕುಂಬಾರ ಹೇಳಿದ್ದಾರೆ.
ಚಿದಾನಂದ ಬಾಲಕರಿದ್ದಾಗಲೇ ತಾಯಿ ಕಸ್ತೂರಿ ತೀರಿಕೊಂಡಿದ್ದಾರೆ. ತಂದೆ ಕಲ್ಲಪ್ಪ ಅವರ ಆಶ್ರಯದಲ್ಲಿ ಬೆಳೆದು ಬಡತನದಲ್ಲೇ ರನ್ನಬೆಳಗಲಿಯ ಸರಕಾರಿ ಎಂಪಿಎಸ್ ಶಾಲೆಯಲ್ಲಿ 1ರಿಂದ 7ನೇ ತರಗತಿ, ಬಿವಿವಿಎಸ್ ಪ್ರೌಢಶಾಲೆಯಲ್ಲಿ 8 ರಿಂದ 10ನೆ ತರಗತಿ ಕಲಿತು, ಜಮಖಂಡಿಯ ಬಿಎಲ್ಡಿಇ ಕಾಲೇಜಿನಲ್ಲಿ ಪಿಯುಸಿ ಸೈನ್ಸ್ ಪಾಸಾಗಿದ್ದರು. ಹುಬ್ಬಳ್ಳಿ ಕಿಮ್ಸ್ ನಲ್ಲಿ ಎಂಬಿಬಿಎಸ್ ಮುಗಿಸಿದ್ದರು. ಒಂದು ವರ್ಷದ ಹಿಂದೆ ಗುವಾಹಟಿಯಲ್ಲಿ ಎಂಡಿ ಮುಗಿಸಿದ್ದರು. ಹೈದರಾಬಾದ್ನ ಗ್ಲೋಬಲ್ ಹಾಸ್ಪಿಟಲ್ನಲ್ಲಿ ಚಿದಾನಂದ ಕೆಲಸ ಮಾಡಿದ್ದಾರೆ.
ಸೂಪರ್ ಸ್ಪೆಷಾಲಿಟಿ ವಿಭಾಗದ ನೀಟ್ ಪರೀಕ್ಷೆಯಲ್ಲಿ ದೇಶಾದ್ಯಂತ 20 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ ಚಿದಾನಂದ ದೇಶಕ್ಕೆ ಮೊದಲ ರ್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ.
ಡಾ.ಚಿದಾನಂದ ತಂದೆಗೆ ಸನ್ಮಾನ
ಬಡತನದ ಮಧ್ಯೆ ಸಾಧನೆ ಮಾಡಿರುವ ಚಿದಾನಂದ ಕುಂಬಾರ ಅವರ ತಂದೆ ಕಲ್ಲಪ್ಪ ಕುಂಬಾರ ಕೂಲಿ ಮಾಡಿ ಮಗನಿಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಸದ್ಯ ಹೊಸದಿಲ್ಲಿಯಲ್ಲಿ ಇರುವ ಯುವಕ ಚಿದಾನಂದ ಪರವಾಗಿ ಅವರ ತಂದೆ ಕಲ್ಲಪ್ಪ ಅವರನ್ನ ಗ್ರಾಮಸ್ಥರು ಸನ್ಮಾನಿಸಿದ್ದಾರೆ. ಊರ ಮಗನ ಸಾಧನೆಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ-ಆರೆಸ್ಸೆಸ್ ಕಚೇರಿಗಳಲ್ಲಿ ಬಿಬಿಎಂಪಿ ವಾರ್ಡುಗಳ ವಿಂಗಡನೆ: ರಾಮಲಿಂಗಾರೆಡ್ಡಿ ಆರೋಪ