'ಸಿಎಂ ಇಬ್ರಾಹಿಂ ಬಿಜೆಪಿಗೆ ಬಂದರೆ ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದಿಲ್ಲ': ಸಚಿವ ಈಶ್ವರಪ್ಪ
ಶಿವಮೊಗ್ಗ,ಫೆ.3: ಸಿಎಂ ಇಬ್ರಾಹಿಂ ಬಿಜೆಪಿಗೆ ಬರುತ್ತೇನೆ ಎಂದರೆ ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದೊಳಗೆ ಅವರ ಹೆಜ್ಜೆಯ ಧೂಳು ಕೂಡ ತಗೋಳಲ್ಲ. ಸಿಎಂ ಇಬ್ರಾಹಿಂ ಏನು ಎಂಬುದು ಗೊತ್ತಿದೆ. ಅವರು ಎಷ್ಟರ ಮಟ್ಟಿಗೆ ಅನ್ಯಾಯ ಮಾಡಿದ್ದಾರೆ ಅನ್ನೋದು ಗೊತ್ತು. ಅವರಿಗೆ ಮಂತ್ರಿಮಂಡಲದಿಂದ ತೆಗೆಯುವವರೆಗೆ ಬಿಜೆಪಿ ಹೋರಾಟ ಮಾಡಿತ್ತು. ಬಿಜೆಪಿಯ ಒತ್ತಾಯದಿಂದಲೇ ಅವರನ್ನು ಕಿತ್ತೆಸೆಯಲಾಗಿತ್ತು. ಭದ್ರಾವತಿಯಲ್ಲಿ ಅವರ ಅಣ್ಣ-ತಮ್ಮಂದಿರು ಏನೇನು ಅನ್ಯಾಯ ಮಾಡಿದ್ದಾರೆ ಎಂಬುದು ಜಿಲ್ಲೆಯ, ರಾಜ್ಯದ ಜನರಿಗೆ ಗೊತ್ತಿದೆ. ಹೀಗಾಗಿ, ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದುವರೆಗೂ ಅವರೇನೂ ನಮ್ಮ ಪಕ್ಷಕ್ಕೆ ಬರುತ್ತೇನೆ ಅಂತ ಹೇಳಿಲ್ಲ. ನೀವು ಕೇಳಿದ್ದಕ್ಕೆ ಹೇಳುತ್ತಿದ್ದೇನೆ ಎಂದರು.
ಜೋಶಿ ಹಾಗೂ ಶ್ರೀರಾಮುಲು ಭೇಟಿ ವಿಚಾರವಾಗಿ ಮಾತನಾಡಿ, ಯಾರೋ ಒಬ್ಬರನ್ನು ಭೇಟಿ ಮಾಡಿದಾಕ್ಷಣ ಬೇಡಿಕೆ ಇಟ್ಟಿದ್ದಾರೆ ಎಂದರ್ಥವಲ್ಲ. ಯಾರು ಬೇಡಿಕೆ ಇಡ್ತಾರೆ, ಯಾರು ಇಡಲ್ಲ ಎಂಬುದು ಪ್ರಶ್ನೆಯಲ್ಲ. ಎಲ್ಲವೂ ಕೇಂದ್ರದ ನಾಯಕರ ತೀರ್ಮಾನ. ಯಾರೂ ಎಲ್ಲೂ ಕೂಡ ಹೇಳಿಲ್ಲ, ಊಹೆ ಮಾಡುವುದು ಸರಿಯಲ್ಲ. ಎಲ್ಲರೂ ಕೂಡ ಸ್ನೇಹಿತರು. ಹೋಗೋದು, ಬರೋದು ಇದ್ದಿದ್ದೆ. ನಮ್ಮ ಮನೆಗೆ ಸಿದ್ದರಾಮಯ್ಯ ಬಂದಿದ್ರು. ನಾನು ಡಿ.ಕೆ.ಶಿವಕುಮಾರ್ ಮನೆಗೆ ಹೋಗಿದ್ದೆ. ಧರಂ ಮನೆಗೆ ಹೋಗಿದ್ದೆ. ಇದಕ್ಕೆಲ್ಲಾ ಸುಮ್ಮನೆ ಹೇಳೊದು ಸರಿಯಲ್ಲ.
'ರಾಜಕೀಯದಲ್ಲಿ ರಾಜಕಾರಣ ಬೇರೆ, ಸ್ನೇಹ ಬೇರೆ. ಅನೇಕರು ನನಗೆ ಫೋನ್ ಮಾಡ್ತಾರೆ. ಅವರ ಕ್ಷೇತ್ರದ ಕೆಲಸದ ಬಗ್ಗೆ ಮಾತಾಡ್ತಾರೆ. ನಮ್ ಮನೆಗೂ ಸಹ ಬರ್ತಾರೆ. ಹಾಗಂತ ಅದಕ್ಕೆ ರಾಜಕೀಯ ಬೆರೆಸೋದು ಸೂಕ್ತ ಅಲ್ಲ. ಒಬ್ಬ ಮಂತ್ರಿ ಅನ್ನೋ ಕಾರಣಕ್ಕೆ ಕ್ಷೇತ್ರದ ಬಗ್ಗೆ ಯೋಚನೆ ಮಾಡಿಕೊಂಡು ಬರ್ತಾರೆ. ಕಾಂಗ್ರೆಸ್, ಜೆಡಿಎಸ್?ನವರು ಬಂದ್ರು ಅನ್ನೋ ಕಾರಣಕ್ಕೆ ರಾಜಕಾರಣ ಮಾಡೋದು ಸರಿಯಲ್ಲ' ಎಂದರು.
ಉಡುಪಿ, ಭದ್ರಾವತಿ ಸೇರಿದಂತೆ ಕೆಲವು ಕಾಲೇಜ್ ಗಳಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಹಿಂದೂ -ಮುಸ್ಲಿಂ ಬಾಂಧವರು ಅಣ್ಣ ತಮ್ಮಂದಿರಂತೆ ಒಟ್ಟಾಗಿ ಬದುಕುತ್ತಿರುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಗೊಂದಲ ಉಂಟು ಮಾಡುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳ ಹಿತದರಷ್ಟಿಯಿಂದ ಆಯಾ ಶಾಲೆ ಕಾಲೇಜುಗಳ ಆಡಳಿತ ಮಂಡಳಿಗಳು ಸೂಕ್ತ ನಿರ್ಧಾರ ಕೈಗೊಂಡು ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.