ಮಡಿಕೇರಿ: ಬಿಜೆಪಿ ಸೇರಿದ್ದ ಚೆಂಬು ಗ್ರಾ.ಪಂ ಉಪಾಧ್ಯಕ್ಷೆ ಮರಳಿ ಕಾಂಗ್ರೆಸ್ ಗೆ
ಮಡಿಕೇರಿ ಫೆ.6 : ಇತ್ತೀಚೆಗೆ ಬಿಜೆಪಿಗೆ ಸೇರಿದ್ದ ಚೆಂಬು ಗ್ರಾ.ಪಂ ಉಪಾಧ್ಯಕ್ಷೆ ಶಶಿಕಲಾ ಕಟ್ಟೆಪಾರೆ ಅವರು ಇಂದು ಮರಳಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರ ಸಮ್ಮುಖದಲ್ಲಿ ಶಶಿಕಲಾ ಕಾಂಗ್ರೆಸ್ ಧ್ವಜ ಸ್ವೀಕರಿಸಿ ಮಾತೃಪಕ್ಷದ ಬಗ್ಗೆ ಅಭಿಮಾನ ತೋರಿದರು.
ಈ ಸಂದರ್ಭ ಮಾತನಾಡಿದ ಎ.ಎಸ್. ಪೊನ್ನಣ್ಣ ಅವರು ಬಿಜೆಪಿಯ ಕುತಂತ್ರ ರಾಜಕಾರಣ ಬಯಲಾಗುತ್ತಿದ್ದು, ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಯಾವುದೇ ರೀತಿಯ ಒತ್ತಡಕ್ಕೆ ಮಣಿಯುವ ಅಗತ್ಯವಿಲ್ಲ. ಧೈರ್ಯದಿಂದ ನಾವೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸುವ ಮೂಲಕ ಕುತಂತ್ರ ರಾಜಕಾರಣಕ್ಕೆ ಅಂತ್ಯ ಹಾಡೋಣ ಎಂದರು.
ಜನಸಾಮಾನ್ಯರ ಸಮಸ್ಯೆಗಳಿಗೆ ನಿತ್ಯ ಸ್ಪಂದಿಸುತ್ತಾ ಜನರ ಬಳಿಗೆ ಪಕ್ಷವನ್ನು ಕೊಂಡೊಯ್ದು ಸಂಘಟನೆ ಮಾಡುವಂತೆ ಕರೆ ನೀಡಿದರು.
ಧರ್ಮಜ ಉತ್ತಪ್ಪ ಮಾತನಾಡಿ ಬಿಜೆಪಿ ನಾಚಿಗೆಗೇಡಿನ ರಾಜಕಾರಣ ಮಾಡುತ್ತಿದ್ದು, ದಕ್ಷಿಣ ಕೊಡಗಿನಲ್ಲೂ ಈ ಪ್ರಯತ್ನ ಮಾಡಿ ಕೈಸುಟ್ಟುಕೊಂಡಿದೆ. ಇದೀಗ ಚೆಂಬು ಪಂಚಾಯ್ತಿಯ ಉಪಾಧ್ಯಕ್ಷರನ್ನು ಒತ್ತಡದಿಂದ ಪಕ್ಷಾಂತರಗೊಳಿಸಿದ್ದು, ಬಿಜೆಪಿಯ ಈ ವರ್ತನೆ ರಾಜಕೀಯ ಕ್ಷೇತ್ರ ತಲೆ ತಗ್ಗಿಸುವಂತೆ ಮಾಡಿದೆ ಎಂದು ಆರೋಪಿಸಿದರು.
ಪ್ರತಿಯೊಬ್ಬ ಜನಪ್ರತಿನಿಧಿಗೂ ವೈಯುಕ್ತಿಕ ಸ್ವಾತಂತ್ರ್ಯವಿದೆ, ಆದರೆ ಅಮಾಯಕ ಜನಪ್ರತಿನಿಧಿಗಳನ್ನು ಆಮಿಷವೊಡ್ಡಿ ತನ್ನತ್ತ ಸೆಳೆಯುವ ಮೂಲಕ ಬಿಜೆಪಿ ನೈತಿಕ ದಿವಾಳಿತನದೆಡೆಗೆ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಗೌಡ, ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಹೊಸೂರು, ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು, ಚೆಂಬು ಗ್ರಾ.ಪಂ ಅಧ್ಯಕ್ಷೆ ಕುಸುಮಾ ಯೋಗೀಶ್ವರ್, ನಾಪೋಕ್ಲು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಜೇಶ್ವರಿ, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಶ್ರೀಧರನ್ ನಾಯರ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹನೀಫ್ ಸಂಪಾಜೆ, ಪ್ರಮುಖ ಮುತ್ತು ರಶೀದ್, ಸಾಮಾಜಿಕ ಜಾಲತಾಣ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಯಶ್ ದೋಳ್ಪಾಡಿ, ಪಂಚಾಯತ್ ಸದಸ್ಯ ಗಿರೀಶ್ ಹೊಸೂರು, ಚೆಂಬು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾರತಿ, ಯುವ ಕಾಂಗ್ರೆಸ್ ವಲಯಾಧ್ಯಕ್ಷ ಭರತ್ ಕೆದಂಬಾಡಿ, ಯುವ ಮುಖಂಡರಾದ ಮನು ಏಣಿಯರ, ಮಧು ಹೊಸೂರು, ಲೋಕೇಶ್ ಹೊದ್ದೆಟ್ಟಿ, ಚನಿಯಪ್ಪ ಕುದುರೆ ಪಾಯ, ಕೆ.ಸಿ.ಸುರೇಶ್ ಮತ್ತಿತರ ಪ್ರಮುಖರು ಹಾಜರಿದ್ದರು.