ಹಿಜಾಬ್ ವಿವಾದ: ಪಿಯು ಮಂಡಳಿ ನಿರ್ದೇಶಕಿ ಸ್ನೇಹಲ್ ವರ್ಗಾವಣೆ ಮಾಡಿ, ಸ್ಥಳ ನಿಯುಕ್ತಿಗೊಳಿಸದ ರಾಜ್ಯ ಸರಕಾರ
photo: twitter- @Mueen_magadi
ಬೆಂಗಳೂರು, ಫೆ.6: ರಾಜ್ಯದಲ್ಲಿ ವಿವಾದವನ್ನು ಸೃಷ್ಟಿಸುತ್ತಿರುವ ಹಿಜಾಬ್ ಧಾರಣೆಗೆ ಸಂಬಂಧಿಸಿದಂತೆ “ಪಿಯು ಹಂತದಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿಲ್ಲ. ಕಾಲೇಜು ಆಡಳಿತ ಮಂಡಳಿಯವರು ಸಮವಸ್ತ್ರ ಕಡ್ಡಾಯಗೊಳಿಸಿರುವುದು ಕಾನೂನುಬಾಹಿರ” ಎಂದು ಆದೇಶ ಹೊರಡಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿಯಾಗಿದ್ದ ಸ್ನೇಹಲ್ ಆರ್. ವರ್ಗಾವಣೆ ಮಾಡಿದ್ದು, ಇನ್ನು ಸ್ಥಳ ನಿಯುಕ್ತಿ ಮಾಡಿಲ್ಲ.
ಇದನ್ನೂ ಓದಿ: ಪಿಯು ಶಿಕ್ಷಣ ಇಲಾಖೆ ನಿರ್ದೆಶಕಿ ಸಹಿತ ನಾಲ್ವರು ಅಧಿಕಾರಿಗಳ ವರ್ಗಾವಣೆ
ಮೊದಲಿನಿಂದ ಜಾರಿಯಲ್ಲಿದ್ದ ಸಮವಸ್ತ್ರ ಮಾರ್ಗಸೂಚಿಯನ್ನು, ಇತ್ತೀಚ್ಚಿಗೆ ಸ್ನೇಹಲ್ ಆರ್. ಸುತ್ತೋಲೆಯಾಗಿ ಹೊರಡಿಸಿದ್ದರು. ಇದು ರಾಜ್ಯ ಸರಕಾರ ಹಾಗೂ ಸಂಘಪರಿವಾರಕ್ಕೆ ಹಿನ್ನೆಡೆಯಾಗಿತ್ತು. ಹಾಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಅವರ ಸ್ಥಾನಕ್ಕೆ ಬೀದರ್ ಜಿಲ್ಲಾಧಿಕಾರಿ ರಾಮಚಂದ್ರರನ್ನು ನೇಮಿಸಿದೆ.
ಉಡುಪಿಯ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರಗಿಡಲಾಗಿತ್ತು. ಅಲ್ಲದೆ ರಾಜ್ಯದ ವಿವಿಧಡೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು. ರಾಜಕಾರಣಿಗಳು ವಿವಾದವನ್ನು ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಕೊಮುವಾದಿ ಸ್ವರೂಪದ ಕೇಂದ್ರವಾಗಿಸಿದ್ದ ಬೆನ್ನಲ್ಲೇ, ಪಿಯು ನಿರ್ದೇಶಕಿ ಸ್ನೇಹಲ್ ಆರ್. ಆದೇಶ ಹೊರಡಿಸಿದ್ದರು. ಹಿಜಾಬ್ಅನ್ನು ವಿರೋಧಿಸುತ್ತಿದ್ದ ಬಿಜೆಪಿ ಶಾಸಕರು ಹಾಗೂ ಸಚಿವರಿಗೆ ಆದೇಶವು ಮುಖಭಂಗವಾಗಿ ಪರಿಣಮಿಸಿತ್ತು. ಇದು ನಿರ್ದೇಶಕಿ ಸ್ನೇಹಲ್ ಆರ್. ವರ್ಗಾವಣೆಗೆ ಕಾರಣವಾಗಿದೆ.