ಕುವೆಂಪು ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟ : ಆರೋಪ
ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯ ದೂರ ಶಿಕ್ಷಣ ನಿರ್ದೇಶನಾಲಯ 2019-20ನೇ ಸಾಲಿನ ವಿದ್ಯಾರ್ಥಿ ಗಳಿಗೆ ಪರೀಕ್ಷೆ ನಡೆಸದೇ ಫಲಿತಾಂಶ ಪ್ರಕಟಿಸಿದ ಆರೋಪ ಕೇಳಿಬಂದಿದೆ.
ಕುವೆಂಪು ತನ್ನ ವ್ಯಾಪ್ತಿಯ ಆಯ್ದ ಅಧ್ಯಯನ ಕೇಂದ್ರಗಳಿಗಷ್ಟೇ ಫಲಿತಾಂಶದ ಪಟ್ಟಿ ರವಾನಿಸಿರುವುದು ಭ್ರಷ್ಟಾಚಾರ ನಡೆದಿದೆ ಎಂದು ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರೇ ಆರೋಪಿಸಿದ್ದಾರೆ. ಹಣ ಸಂದಾಯ ಮಾಡಿರುವ ಕೇಂದ್ರಗಳ ವಿದ್ಯಾರ್ಥಿಗಳ ಫಲಿತಾಂಶ ಮಾತ್ರ ಪ್ರಕಟಿಸಲಾಗಿದ್ದು, ಉಳಿದ ಕೇಂದ್ರಗಳ ಫಲಿತಾಂಶ ತಡೆಹಿಡಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕುವೆಂಪು ವಿಶ್ವವಿದ್ಯಾಲಯವು 2019-20ನೇ ಸಾಲಿನಲ್ಲಿ ವಿದ್ಯಾರ್ಥಿ ಗಳನ್ನು ದೂರಶಿಕ್ಷಣದ ವಿವಿಧ ಸ್ನಾತಕ-ಸ್ನಾತಕೋತ್ತರ ಕೋರ್ಸ್ ಗಳಿಗೆ ಅಧ್ಯಯನ ಕೇಂದ್ರಗಳ ಮೂಲಕ ಪ್ರವೇಶಾತಿ ಮಾಡಿಕೊಂಡಿದೆ. ಪ್ರಸ್ತುತ ಕೆಲವು ಕೋರ್ಸ್ಗಳ ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆ ನಡೆಸಿದೆ. ಇನ್ನುಳಿದ ಇತರೆ ಕೋರ್ಸ್ ಗಳ ವಿದ್ಯಾರ್ಥಿಗಳಿಗೂ ಸಹ ಯುಜಿಸಿ ಹಾಗೂ ಸರ್ಕಾರದ ನಿಯಮಗಳನ್ವಯ ಪರೀಕ್ಷೆ ನಡೆಸಿ ಫಲಿತಾಂಶ ನೀಡುವಂತೆ 21.11.2021ರ ಸಿಂಡಿಕೇಟ್ ಸಭೆಯಲ್ಲಿ ಸರ್ವಾನು ಮತದ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.
ಆದರೆ ಫೆ.7ರಂದು ವಿಶ್ವವಿದ್ಯಾಲಯವು ಸಕ್ಷಮ ಪ್ರಾಧಿಕಾರಗಳ ತೀರ್ಮಾನಕ್ಕೆ ವಿರುದ್ಧವಾಗಿ, ನಿಯಮಬಾಹಿರ ಆದೇಶ ಹೊರಡಿಸಿ ಕೆಲವು ಕೋರ್ಸ್ಗಳ ಫಲಿತಾಂಶವನ್ನು ಕೇವಲ ಹೋಮ್ ಅಸೈನ್ ಮೆಂಟ್, ಸಂಪರ್ಕ ತರಗತಿಯ 5 ಅಂಕಗಳ ಆಧಾರದ ಮೇಲೆ ಇಡೀ ಪರೀಕ್ಷೆಯ ಫಲಿತಾಂಶವನ್ನೇ ಪ್ರಕಟಿಸಲಾಗಿದೆ. ಪ್ರಸ್ತುತ ಪದವಿ ತರಗತಿಗಳ ಫಲಿತಾಂಶ ಪ್ರಕಟಿಸಿದ್ದರೂ, ಎಲ್ಲ ಕೇಂದ್ರಗಳ ಫಲಿತಾಂಶ ನೀಡಿಲ್ಲ.
ತುರ್ತು ಫಲಿತಾಂಶ ಪ್ರಕಟಿಸಲು ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಅಧ್ಯಯನ ಕೇಂದ್ರಗಳ ನಡುವೆ ಹಣಕಾಸಿನ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಪ್ರತಿ ವಿದ್ಯಾರ್ಥಿಯಿಂದ 2 ರಿಂದ 3 ಸಾವಿರದವರೆಗೆ ವಸೂಲಿ ಮಾಡಲಾಗಿದೆ. 17 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, 4 ಕೋಟಿಗೂ ಅಧಿಕ ಹಣ ಸಂಗ್ರಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಸಿಂಡಿಕೇಟ್ ಸದಸ್ಯರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಪರೀಕ್ಷೆ ಇಲ್ಲದೇ ಫಲಿತಾಂಶ ಪ್ರಕಟಿಸಿದರೆ ವಿಶ್ವವಿದ್ಯಾಲಯದ 1.75 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ವಿವಿಧ ವಿಭಾಗಗಳ ಪ್ರಾಧ್ಯಾಪಕರು ಕಳವಳ ವ್ಯಕ್ತಪಡಿಸಿದ್ದಾರೆ. ಸಂಪರ್ಕ ತರಗತಿ ನಡೆಸದಿದ್ದರೂ ಎಲ್ಲ ವಿದ್ಯಾರ್ಥಿಗಳಿಗೂ ಗರಿಷ್ಠ 5 ಅಂಕ ನೀಡುವಂತೆ ಪರೀಕ್ಷಾಂಗ ಕುಲಸಚಿವ ತ್ಯಾಗರಾಜ್ ಅವರು ಫೆ.7ರಂದು ಸುತ್ತೋಲೆ ಹೊರಡಿಸಿದ್ದು, ಆದೇಶದ ಪ್ರತಿ ತಲುಪುವ ಮೊದಲೇ ಫೆ.9ರಂದು ಫಲಿತಾಂಶ ಪ್ರಕಟಿಸಲಾಗಿದೆ.
ಹಲವು ನಿಯಮ ಬಾಹಿರ ತೀರ್ಮಾನಗಳನ್ನು ವೈಯಕ್ತಿಕ ನೆಲೆಯಲ್ಲಿ ತೆಗೆದುಕೊಳ್ಳುತ್ತ, ಕಾನೂನು ಬಾಹಿರ ಆದೇಶಗಳನ್ನು ಹೊರಡಿಸಿಕೊಂಡು ಫಲಿತಾಂಶ ಪ್ರಕಟಿಸಿ ವಿವಿ ಘನತೆಗೆ ಧಕ್ಕೆ ತಂದಿರುವ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿರುವ ಪರೀಕ್ಷಾಂಗ ಕುಲಸಚಿವರನ್ನು ತಕ್ಷಣವೇ ಅಮಾನತುಗೊಳಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಸಮಗ್ರ ತನಿಖೆ ನಡೆಸಲು ಸೂಕ್ತ ಕ್ರಮ ಕೈ ಗೊಳ್ಳಬೇಕೆಂದು ಸಿಂಡಿಕೇಟ್ ಸದಸ್ಯ ಸಂತೋಷ್ ಬೆಳ್ಳೇಕೆರೆ ಒತ್ತಾಯಿಸಿದ್ದಾರೆ.