ಪೊಲೀಸರ ಸಹಕಾರ ಪಡೆದು ಅವೈಜ್ಞಾನಿಕ ರಸ್ತೆ ಉಬ್ಬುಗಳ ತೆರವು: ಸಚಿವ ಸಿ.ಸಿ.ಪಾಟೀಲ್
ಫೈಲ್ ಚಿತ್ರ- ಸಿ.ಸಿ.ಪಾಟೀಲ್
ಬೆಂಗಳೂರು, ಫೆ. 21: ‘ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಅವೈಜ್ಞಾನಿಕ ರಸ್ತೆ ಉಬ್ಬು(ಹಂಪ್ಸ್)ಗಳನ್ನು ತೆರವುಗೊಳಿಸುವ ಸಂಬಂಧ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ' ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದ್ದಾರೆ.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಕುಮಾರ ಬಂಗಾರಪ್ಪ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವು ಮಾಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಈಗಾಗಲೇ ಅಧಿಕಾರಿಗಳ ಆ ಕಾರ್ಯಕ್ಕೆ ಮುಂದಾಗಿದ್ದಾರೆ. ಕೆಲವುಗಳನ್ನು ಅಪಘಾತ ಸಂಭವಿಸುತ್ತವೆಂದು ಗ್ರಾಮಸ್ಥರು ರಸ್ತೆ ಉಬ್ಬುಗಳ ತೆರವಿಗೆ ಆಕ್ಷೇಪಿಸುತ್ತಿದ್ದಾರೆ.
ಆ ಹಿನ್ನೆಲೆಯಲ್ಲಿ ಪೊಲೀಸರ ಸಹಕಾರ ಪಡೆದು ಅವೈಜ್ಞಾನಿಕವಾಗಿ ಹಾಕಿರುವ ರಸ್ತೆ ಉಬ್ಬಗಳನ್ನು ತೆರವು ಮಾಡಲಾಗುವುದು. ಜೊತೆಗೆ ಸದಸ್ಯರಾದ ಕುಮಾರ ಬಂಗಾರಪ್ಪ ನೀಡಿರುವ ಸಲಹೆಯಂತೆ ರಸ್ತೆಗಳನ್ನು ಇಂಡಿಯನ್ ರೋಡ್ ಕಾಂಗ್ರೆಸ್(ಐಆರ್ಸಿ) ಮಾನದಂಡಗಳ ಅನ್ವಯ ರಸ್ತೆ ಗುಣಮಟ್ಟ ಕಾಪಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.