'ದಲಿತರ ಕಬ್ಬಿನ ಹಾಲು ಕುಡಿಯಬೇಕೆ' ಎಂದು ನಿಂದಿಸಿ ಅಂಗಡಿ ಧ್ವಂಸ, ಹಲ್ಲೆ: 8 ಮಂದಿ ವಿರುದ್ಧ ದೂರು ದಾಖಲು
ಘಟನೆಯ ವಿಡಿಯೋ ವೈರಲ್
ಅರಕಲಗೂಡು: ದಲಿತರ ಕೈಯಲ್ಲಿ ಕಬ್ಬಿನ ಹಾಲು ಕುಡಿಸುತ್ತೀಯಾ ಎಂದು ಜಾತಿ ನಿಂದನೆ ಮಾಡಿ ಕಬ್ಬಿನ ಗಾಡಿಯನ್ನು ಧ್ವಂಸ ಗೊಳಿಸಿ ಅಪ್ಪ, ಮಗನಿಗೆ ಹಲ್ಲೆನಡೆಸಿರುವ ಅಮಾನವೀಯ ಘಟನೆ ಅರಕಲಗೂಡು ತಾಲೂಕು, ರುದ್ರಾಪಟ್ಟಣ ಸಮೀಪ ಭಾನುವಾರ ನಡೆದಿದ್ದು ಪ್ರಕರಣಕ್ಕೆ ಸಂಬಂದಿಸಿದಂತೆ ಸೋಮವಾರ ಸಂಚೆ ದೂರು ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಶ್ ಸುನೀಲ್, ತಂದಿಮ್ ಪಾಷಾ, ಗುಂಡ, ರವಿ ಚಂದ್ರ, ಹಾಗೂ ಇಬ್ಬರ ಮೇಲೆ ಮೇಲೆ ಕೊಣನೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಂದ್ರು ಎಂಬುವರು ಗಂಗೂರು ಸರ್ಕಾರಿ ಆಸ್ಪತ್ರೆ ರಸ್ತೆ ಬದಿಯಲ್ಲಿ, ತಳ್ಳುವ ಗಾಡಿಯ ಕಬ್ಬಿನ ಹಾಲಿನ ಅಂಗಡಿ ಹಾಕಿಕೊಂಡು ಕಳೆದ ಒಂದೂವರೆ ವರ್ಷದಿಂದ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ.
ಈ ಮದ್ಯೆ ರಸ್ತೆ ಬದಿ ತೋಟದ ಮಾಲೀಕ ರಾಜೇಶ್ ಮತ್ತು ಸುನೀಲ್ ಎಂಬುವರು ಇದು ನಮ್ಮ ಪಕ್ಕದ ತೋಟದಲ್ಲಿದೆ ನಾನು ಎಳನೀರು ಹಾಕುತ್ತೇನೆ. ಬೇರೆ ಕಡೆ ಹಾಕಿಕೋ ಎಂದು ಹೇಳಿದ್ದಕ್ಕೆ ಸ್ವಲ್ಪ ದೂರದಲ್ಲಿ ಗಾಡಿ ಹಾಕಿದ್ದಾರೆ.
ಆದರೆ ಮರುದಿನ ಮತ್ತೊಬ್ಬ ವ್ಯಕ್ತಿಯ ನ್ನು ಕರೆತಂದ ತೋಟದ ಮಾಲಿಕ ಸುನೀಲ್ ಬೇರೊಂದು ಕಬ್ಬಿನ ಗಾಡಿ ಹಾಕಿಸಿದ್ದಾರೆ.
ಯಾಕೆ ಹೀಗೆ ಮಾಡಿದ್ದೀರಿ ಎಂದು ಚಂದ್ರು ಕೇಳಿದಾಗ ' ನಾವೆಲ್ಲಾ ನೀವು ಮಾಡಿದ ಕಬ್ಬಿನ ಹಾಲು ಕುಡಿಯಬೇಕಾ' ಎಂದು ಹೇಳಿ ಜಾತಿ ನಿಂಧನೆ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಅಲ್ಲದೇ ಕೂಡಲೇ ಕಬ್ಬಿನ ಗಾಡಿ ತೆಗೆಯಬೇಕೆಂದು ಬೆದರಿಸಿದ ನಾಲ್ಕೈದು ಜನರ ತಂಡ ಕಬ್ಬನ್ನು ಎಸೆದು ಗಾಡಿಯನ್ನು ಧ್ವಂಸಗೊಳಿಸಿದ್ದಾರೆ. ವಿಚಾರ ತಿಳಿದ ಸ್ಥಳೀಯರು ಅಪ್ಪ ಮಗನನ್ನು ರಕ್ಷಿಸಿದ್ದಾರೆ ಎಂದು ಹೇಳಲಾಗಿದೆ.