ಭಾರತೀಯ ಸಂಸ್ಕೃತಿಗೆ ಧಕ್ಕೆ ತರಬೇಡಿ : ಸಿ.ಎಂ.ಇಬ್ರಾಹಿಂ
ಎಮ್ಮೆಮಾಡು ದರ್ಗಾ ಶರೀಫ್ ಉರೂಸ್
ಮಡಿಕೇರಿ : ಜಾತ್ಯತೀತ ರಾಷ್ಟ್ರ ಭಾರತದಲ್ಲಿ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಸಂಸ್ಕೃತಿಯನ್ನು ಅನುಸರಿಸಲು ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಆದರೆ ಹಿಜಾಬ್ ವಿಚಾರದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಲಾಗಿದೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಆರೋಪಿಸಿದ್ದಾರೆ.
ನಾಪೋಕ್ಲು ಸಮೀಪದ ಎಮ್ಮೆಮಾಡು ದರ್ಗಾ ಶರೀಫ್ ವಾರ್ಷಿಕ ಉರೂಸ್ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಾರತೀಯ ಸಂಸ್ಕೃತಿಗೆ ದಕ್ಕೆ ತರುವ ಕೆಲಸ ಮಾಡಬಾರದು ಎಂದರು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ನಾವೆಲ್ಲರೂ ಒಂದೇ, ನಮ್ಮ ದೇಶದ ಸಂವಿಧಾನ ನಮಗೆ ಬದುಕುವ ಅವಕಾಶ ಕಲ್ಪಿಸಿದೆ. ಅವರವರ ಧರ್ಮವನ್ನು ಅವರವರು ಪಾಲಿಸಿಕೊಂಡು ಬರವಾಗ ಕೋಮು ಭಾವನೆ ಕೆರಳಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.
ಹಿಜಾಬ್ ವಿಚಾರದಲ್ಲಿ ನ್ಯಾಯಾಲಯ ನೀಡುವ ತೀರ್ಪಿಗೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ ನಾವೆಲ್ಲರೂ ಸಹೋದರರಂತೆ ಇದ್ದೇವೆ, ಮುಂದೆಯೂ ಸಾಮರಸ್ಯದಿಂದ ಇರೋಣ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮೌಲಾನಾ ಪೇರೋಡ್ ಅಬ್ದುಲ್ ರೆಹಮಾನ್ ಸಖಾಫಿ ಮಾತನಾಡಿದರು.
ಜಮಾಅತ್ ಅಧ್ಯಕ್ಷ ಕೆ.ಎಸ್.ಅಬ್ದುಲ್ ಖಾದರ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಫೂದ್ದೀನ್ ತಂಙಳ್, ಗ್ರಾ.ಪಂ ಸದಸ್ಯ ಚಂಬಾರಂಡ ಮಾಹಿನೆ, ಪ್ರಮುಖರಾದ ಇಬ್ರಾಹಿಂ, ಉಸ್ಮಾನ್ ಹಾಜಿ. ಎಂ.ಎ.ಮನ್ಸೂರ್ ಆಲಿ, ಎಂ.ಜಿ.ಜಾಹಿರ್ ಖಾನ್, ಚಂಬಾರಂಡ ಮೊಯ್ದು, ಬಿ.ಯು.ಮುಹಮ್ಮದ್ ಅಶ್ರಫ್, ಮಹಮ್ಮದ್ ಹಾಜಿ ಕುಂಜಿಲ ಮತ್ತಿತರರು ಹಾಜರಿದ್ದರು.