ಮಾ.4ರಂದು ಕಾರ್ಮಿಕರಿಂದ ವಿಧಾನಸೌಧ ಚಲೋ
ಬೆಂಗಳೂರು: ಕಾರ್ಮಿಕ ಕಲ್ಯಾಣ ಮಂಡಳಿಗಳಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಖಂಡಿಸಿ, ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಪ್ರಶ್ನಿಸಿ ಮಾ.4ರಂದು ವಿಧಾನಸೌಧ ಚಲೋ ಅನ್ನು ನಡೆಸಲಾಗುವುದು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ಕರೆ ನೀಡಿದೆ.
ಸ್ವತಂತ್ರ ಪೂರ್ವದಿಂದ ಕಾರ್ಮಿಕರ ಅಸ್ತ್ರವಾಗಿದ್ದ, 29 ಕಾನೂನುಗಳನ್ನು ಒಟ್ಟುಗೂಡಿಸಿ, 4 ಕಾರ್ಮಿಕ ಸಂಹಿತೆಗಳನ್ನಾಗಿ ಮಾಡುವ ಮೂಲಕ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ. ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಹೆಚ್ಚಿಸದೆ ಬಂಡವಾಳಶಾಹಿ ಧೋರಣೆಯನ್ನು ಸರಕಾರ ಮಾಡುತ್ತಿದೆ. ಅಲ್ಲದೇ, ಕಾರ್ಮಿಕ ಇಲಾಖೆಯ ತ್ರಿಪಕ್ಷೀಯ ಸಮಿತಿಗಳಿಂದ ಸಿಐಟಿಯುವನ್ನು ಹೊರಗಿಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಎಲ್ಲಾ ಕಾರ್ಮಿಕರಿಗೆ ಕನಿಷ್ಠ 24 ಸಾವಿರ ರೂ.ಗಳ ಕನಿಷ್ಠ ವೇತನವನ್ನು ನೀಡಬೇಕು. ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಬೇಕು. ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಅಸಂಘಟಿಕ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆಯನ್ನು ಜಾರಿಗೊಳಿಸಿ, ಕನಿಷ್ಠ 500 ಕೋಟಿ ರೂ.ಗಳನ್ನು ಮೀಸಲಿಡಬೇಕು. ಸಾರ್ವಜನಿಕ ಕ್ಷೇತ್ರಗಳ ಖಾಸಗಿಕರಣವನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದೆ.