ಅರಕಲಗೂಡು: ತವರಿಗೆ ಮರಳಿದ ಉಕ್ರೇನ್ ನಲ್ಲಿ ಸಿಲುಕಿದ್ದ ವಿದ್ಯಾರ್ಥಿ
ಅರಕಲಗೂಡು: ಉಕ್ರೇನ್ ನಲ್ಲಿ ಸಿಲುಕಿದ್ದ ತಾಲೂಕಿನ ಕೆಸವತ್ತೂರು ಗ್ರಾಮದ ಹಿಮನ್ ರಾಜ್ ಮಂಗಳವಾರ ಪೋಷಕರ ಮಡಿಲು ಸೇರಿದ್ದಾರೆ.
ಉಕ್ರೇನ್ ಉಜ್ಹೋರೋದ್ ನ್ಯಾಷನಲ್ ಯುನಿವರ್ಸಿಟಿ ಯಲ್ಲಿ ಎಂಬಿಬಿಎಸ್ ಪ್ರಥಮ ವರ್ಷದ ಮೆಡಿಕಲ್ ವಿದ್ಯಾರ್ಥಿ ಯಾಗಿದ್ದ ಹಿಮನ್ ರಾಜ್ ಕಳೆದ ಮೂರು ತಿಂಗಳ ಹಿಂದಷ್ಟೇ ವೈದ್ಯಕೀಯ ವ್ಯಾಸಂಗಕ್ಕಾಗಿ ತೆರಳಿದ್ದರು. ಇವರು ಕಲಿಯುತ್ತಿದ್ದ ಯುನಿವರ್ಸಿಟಿ ವೆಸ್ಟ್ ರ್ನ್ ಬಾರ್ಡರ್ ನಲ್ಲಿದ್ದು ಇಲ್ಲಿ ಯುದ್ಧದ ಭೀತಿ ಅಷ್ಟಾಗಿರಲಿಲ್ಲ.
ಉಜ್ಹೊರೋದ್ ಯುನಿವರ್ಸಿಟಿ ಯಿಂದ 240 ಭಾರತೀಯ ವಿದ್ಯಾರ್ಥಿಗಳು ಭಾನುವಾರ ಬಸ್ ಮೂಲಕ ಪಕ್ಕದ ರಾಷ್ಟ್ರವಾದ ಹಂಗೇರಿ ಬುಡ್ಸಪೆಟ್ ವಿಮಾನ ನಿಲ್ದಾಣ ತಲುಪಿ ಅಲ್ಲಿಯ ಭಾರತೀಯ ರಾಯಭಾರಿ ಸಂಪರ್ಕಿಸಿ ದೆಹಲಿಯ ಇಂದಿರಾಗಾಂಧಿ ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದು ಬೆಂಗಳೂರಿಗೆ ಬಂದು ಇಂದು ಕೆಸವತ್ತೂರು ತಲುಪಿದ್ದಾರೆ.
ಹಾಸನದ ಬಿಜಿಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯು ಹಾಗೂ ಹಾಸನದ ವಿದ್ಯಾನಿಕೇತನದಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಶೇ 87 ರಷ್ಟು ಫಲಿತಾಂಶ ಪಡೆದು ನೀಟ್ ಎಲಿಜಬಲ್ ಮೂಲಕ ಉಕ್ರೇನ್ ಗೆ ಮೆಡಿಕಲ್ ಕಾಲೇಜಿಗೆ 5.25 ಲಕ್ಷ ಶುಲ್ಕ ನೀಡಿ ಸೇರಿದ್ದರು.
ಹಿಮನ್ ರಾಜ್ ಮತ್ತು ಹಿಟನ್ ರಾಜ್ ಇಬ್ಬರು ಅವಳಿ ಪುತ್ರರು. ಹಿಟನ್ ರಾಜ್ ಹಾಸನದ ರಾಜೀವ್ ಕಾಲೇಜಿನಲ್ಲಿ ಇಂಜಿನಿಯರ್ ಕಲಿಯುತ್ತಿದ್ದಾರೆ. ತಮ್ಮ ಮಗ ಉಕ್ರೇನ್ ನಿಂದ ಸುರಕ್ಷಿತವಾಗಿ ಮನೆ ತಲುಪಿರುವುದು ಮಹದಾನಂದ ತಂದಿದೆ ಎಂದು ಪೋಷಕರಾದ ಮಹಾದೇವ್, ರಾಧಿಕಾ ಸಂತಸ ವ್ಯಕ್ತಪಡಿಸಿದರು.