ನಂಜನಗೂಡು: ಮೂವರು ಸಹೋದರರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ; ಆರೋಪ
ನ್ಯಾಯ ದೊರಕಿಸಿಕೊಡುವಂತೆ ಕುಟುಂಬದವರ ಅಳಲು
ನಂಜನಗೂಡು,ಮಾ.21: ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಕುಟುಂಬವೊಂದಕ್ಕೆ ಅವರದೇ ಸಮುದಾಯದವರು ಸಾಮಾಜಿಕ ಬಹಿಷ್ಕಾರ ಹಾಕಿ, ಮಾನಸಿಕ ಕಿರುಕುಳ ನೀಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೊಂತಯ್ಯನ ಹುಂಡಿ ಗ್ರಾಮದಲ್ಲಿ ನಡೆದಿದೆ.
ಕೊಂತಯ್ಯನಹುಂಡಿ ಗ್ರಾಮದ ಗುರುಮಲ್ಲಪ್ಪ, ಪರಶಿವಪ್ಪ ಮತ್ತು ಮಹದೇವಪ್ಪ ಎಂಬ ಮೂವರು ಸಹೋದರರ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದೆ. ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಕೃಷಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿರುವ ಗ್ರಾಮದ ಮುಖಂಡರುಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇವರು ನೀಡಿರುವ ದೂರನ್ನು ವಾಪಸ್ ಪಡೆಯುವಂತೆ ಗ್ರಾಮದ ಮುಖಂಡರುಗಳು ಒತ್ತಡ ಹಾಕಿದ್ದರು. ಇದನ್ನು ನಿರಾಕರಿಸಿದ್ದಕ್ಕೆ ಇಡೀ ಕುಟುಂಬದವರಿಗೆ ಸಾಮಾಜಿಕ ಬಹಿಷ್ಕರಾ ಹಾಕಿದ್ದಾರೆ.
ಈ ಸಂಬಂಧ ಮಾಧ್ಯಮದವರೊಂದಿಗೆ ಅಳಲು ತೋಡಿಕೊಂಡಿರುವ ಕುಟುಂಬದವರು, 'ಗ್ರಾಮಸ್ಥರು ನೀಡುತ್ತಿರುವ ಕಿರುಕುಳದಿಂದ ನಮಗೆ ಸಾಕಾಗಿದೆ. ಗ್ರಾಮದಲ್ಲಿ ಅಂಗಡಿಯಲ್ಲಿ ಸಾಮಾನು ಕೊಡುವುದಿಲ್ಲ. ಡೈರಿಯಲ್ಲಿ ಹಾಲು ನೀಡುವುದಿಲ್ಲ, ಕುಡಿಯಲು ನೀರು ತರುವಹಾಗಿಲ್ಲ, ಯಾರದರೂ ನಮ್ಮನ್ನು ಮಾತನಾಡಿಸಿದರೆ 3 ಸಾವಿರ ರೂ. ದಂಡ ಹಾಕುತ್ತಾರೆ. ಇಷ್ಟೆಲ್ಲಾ ಯಾತನೆಯನ್ನು ಅನುಭವಿಸುತ್ತಿದ್ದು, ನಾವುಗಳು ಬದುಕಿರಲೇ ಬಾರದು ಎಂಬಂತಾಗಿದೆ. ನಮಗೆ ನ್ಯಾಯ ದೊರಕಿಸಿಕೊಡುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ನಂಜನಗೂಡು ತಹಶೀಲ್ದಾರ್ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ನೊಂದು ನುಡಿದರು.
ಗ್ರಾಮದವರ ಕಿರುಕುಳ ನಮಗೆ ಸಾಕಾಗಿದೆ. ಹಾಗಾಗಿ ನಮಗೆ ಸಂಬಂಧಪಟ್ಟವರು ಕೂಡಲೇ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.