ರವಿ ಚನ್ನಣ್ಣನವರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ: ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ
ಬೆಂಗಳೂರು, ಮಾ.28: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ ವಿರುದ್ಧದ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಆರೋಪದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ರವಿ ಚನ್ನಣ್ಣನವರ ವಿರುದ್ಧದ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಆರೋಪದ ಕುರಿತಂತೆ ರಾಜ್ಯ ಸರಕಾರ ತನಿಖೆ ನಡೆಸಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಸಿಬಿಐ ಅಥವಾ ಈಡಿಯಿಂದ ತನಿಖೆ ನಡೆಸುವಂತೆ ನಿರ್ದೇಶಿಸಲು ಕೋರಿ ಹೈಕೋರ್ಟ್ ಗೆ ವಕೀಲ ಕೆ.ಎನ್.ಜಗದೀಶ್ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅವರ ತಂದೆ-ತಾಯಿ ಈ ಮೊದಲು ಮಾಧ್ಯಮ ಪ್ರಕಟಣೆ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿರುವಂತೆ ನಮ್ಮದು ಅಕ್ರಮ ಆಸ್ತಿ ಅಲ್ಲ ಎಂದು ರವಿ ಅವರ ತಾಯಿ ರತ್ನವ್ವ ಮತ್ತು ತಂದೆ ದ್ಯಾಮಪ್ಪ ಚನ್ನಣ್ಣವರ ಸ್ಪಷ್ಟನೆ ನೀಡಿದ್ದರು.
ತಮ್ಮ ಹೆಸರಿನಲ್ಲಿರುವ ಆಸ್ತಿ ವಿವರದ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿದ್ದ ಅವರು, 25 ವರ್ಷಗಳಿಂದ ನಮ್ಮ ಕುಟುಂಬಕ್ಕೆ 6 ಎಕರೆ ಪಿತ್ರಾರ್ಜಿತ ಆಸ್ತಿ ಇತ್ತು ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ, ಸ್ವಂತ ಪರಿಶ್ರಮದಿಂದ ಹಿರಿಯ ಮಗ ಯುಪಿಎಸ್ಸಿ ತೇರ್ಗಡೆಯಾಗಿ, ಐಪಿಎಸ್ ಅಧಿಕಾರಿಯಾಗಿದ್ದಾನೆ. ನಮ್ಮ ಕಿರಿಯ ಮಗ ರಾಘವೇಂದ್ರ ಚನ್ನಣ್ಣವರ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ. ಅವರು ಸುಮಾರು ಐದು ಸ್ಥಳಗಳಲ್ಲಿರುವ ಆಸ್ತಿ ವಿವರ ಪ್ರಕಟಿಸಿದ್ದರು. ಕಿರಿಯ ಮಗನ ಆದಾಯ, ಕೃಷಿ ಆದಾಯದಿಂದ ಆಸ್ತಿ ಗಳಿಸಿರುವ ಆಸ್ತಿಯ ವಿವರಗಳನ್ನೂ ಬಹಿರಂಗಪಡಿಸಿದ್ದರು.
ಕುಟುಂಬ ಸಂಪಾದಿಸಿದ ಆದಾಯ ಮಾಹಿತಿಯನ್ನು ಸಲ್ಲಿಸುತ್ತಿದ್ದೇವೆ. ವ್ಯಾಪಾರದಲ್ಲಿ ಆಸಕ್ತಿಯಿರುವ ಹಿನ್ನೆಲೆಯಲ್ಲಿ ಕಿರಿಯ ಮಗ ಮನೆ ದೇವರು ರೇಣುಕಾ ಎಂಟರ್ ಪ್ರೈಸಸ್ ಹೆಸರಲ್ಲಿ ವ್ಯಾಪಾರ ನಡೆಸಲು ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದ. ನಮ್ಮ ಎಲ್ಲ ಆಸ್ತಿ ಪರಿಶ್ರಮದಿಂದಲೇ ಸಂಪಾದಿಸಿದ್ದು ಎಂದು ಅವರು ಹೇಳಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬುತ್ತಿರುವ ಸುದ್ದಿ ಸುಳ್ಳು ಹಾಗೂ ಹೀಗೆ ಸುಳ್ಳುಸುದ್ದಿ ಹಬ್ಬಿಸುವುದು ಶಿಕ್ಷಾರ್ಹ ಅಪರಾಧ. ಸುಳ್ಳುಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದರು.