ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ ರದ್ದು
ಬೆಂಗಳೂರು, ಮಾ.28: ವಿವಿಧ ಕಾರ್ಯಕ್ರಮ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲು ಏ. 5ರಂದು ಕರ್ನಾಟಕಕ್ಕೆ ಆಗಮಿಸಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ರದ್ದಾಗಿದೆ. ಸತತ ಎರಡನೇ ಬಾರಿ ಪ್ರಧಾನಿ ರಾಜ್ಯ ಪ್ರವಾಸ ರದ್ದಾಗಿದೆ. ಈ ಕುರಿತು ಸಿಎಂ ಕಚೇರಿಗೆ ಪ್ರಧಾನಿಗಳ ಕಚೇರಿಯಿಂದ ಅಧಿಕೃತ ಮಾಹಿತಿ ರವಾನೆಯಾಗಿದೆ.
ಏಪ್ರಿಲ್ 5ರಂದು ಮೂರು ಕಾರ್ಯಕ್ರಮಗಳ ಉದ್ಘಾಟನೆಗಾಗಿ ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಜೊತೆ ಕರ್ನಾಟಕ್ಕೆ ಆಗಮಿಸಬೇಕಿತ್ತು. ಆದರೆ ನಫ್ತಾಲಿಗೆ ಕೊರೋನಾ ಕಾಣಿಸಿಕೊಂಡಿದ್ದರಿಂದ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಅವರ ಭಾರತ ಪ್ರವಾಸ ರದ್ದುಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮೋದಿ ಅವರ ರಾಜ್ಯ ಪ್ರವಾಸ ರದ್ದಾಗಿದೆ.
ಮಾರ್ಚ್ ತಿಂಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸಕ್ಕೆ ದಿನಾಂಕ ನಿಗದಿಯಾಗಿತ್ತು. ಹಲವು ಕಾರ್ಯಕ್ರಮಗಳ ನಿಮಿತ್ತ ಕರ್ನಾಟಕ ಪ್ರವಾಸ ಮಾಡಲು ಮೋದಿ ಸಜ್ಜಾಗಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ರಾಜ್ಯ ಪ್ರವಾಸ ರದ್ದಾಗಿತ್ತು. ಇದೀಗ ಸತತ ಎರಡನೇ ಬಾರಿ ಪ್ರವಾಸ ರದ್ದಾಗಿದೆ.