ನಂಜನಗೂಡು: ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯಕರನ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಯುವತಿ
ಸಾಂದರ್ಭಿಕ ಚಿತ್ರ
ಮೈಸೂರು: ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯೋರ್ವಳು ಪ್ರಿಯಕರನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿ ಕಂದೇಗಾಲದ ತ್ಯಾಗರಾಜ್ ಮತ್ತು ಅದೇ ಗ್ರಾಮದ ಕಾವ್ಯ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಎಪ್ರಿಲ್ 1ರಂದು ತ್ಯಾಗರಾಜ್ ಹುಟ್ಟುಹಬ್ಬ ಆಚರಣೆಗೆ ಯುವತಿ ಕಾವ್ಯ ಸೇರಿದಂತೆ ತನ್ನ ಸ್ನೇಹಿತರನ್ನು ಆಹ್ವಾನಿಸಿದ್ದಾನೆ. ಕೇಕ್ ಕತ್ತರಿಸಿದ ಮೇಲೆ ಕಾವ್ಯ ತನ್ನನ್ನು ಮದುವೆಯಾಗುವಂತೆ ತ್ಯಾಗರಾಜ್ ಬಳಿ ಎಲ್ಲರ ಮುಂದೆ ಕೇಳಿದ್ದಾಳೆ. ಇದರಿಂದ ಕೆರಳಿದ ತ್ಯಾಗರಾಜ್ ಕಾವ್ಯಳಿಗೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಹಿಂದೆ ಕಾವ್ಯಳಿಗೆ ಅವರ ಮನೆಯವರು ಬೇರೆ ಸಂಬಂಧ ನೋಡಿ ಮದುವೆ ಮಾಡಲು ಮುಂದಾದಾಗ ಇದನ್ನು ತ್ಯಾಗರಾಜ್ ತಡೆದಿದ್ದಾನೆ. ಬೇರೆ ಮದುವೆಗೆ ಒಪ್ಪಬೇಡ ಎಂದು ಒತ್ತಾಯ ಮಾಡಿ ಬೇರೆಯವರ ಜೊತೆ ಮದುವೆಯಾಗುವುದನ್ನು ತಪ್ಪಿಸಿದ್ದಾನೆ ಎಂದು ಹೇಳಲಾಗಿದೆ. ಬಳಿಕ ಕಾವ್ಯ ಜೊತೆ ದೈಹಿಕ ಸಂಬಂಧ ಬೆಳೆಸಿ ಈಗ ಮದುವೆಯಾಗಲು ನಿರಾಕರಿಸಿದ್ದರಿಂದ ಬೇಸತ್ತ ಕಾವ್ಯ ತ್ಯಾಗರಾಜ್ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ.
ತೀವ್ರ ಅಸ್ವಸ್ಥಗೊಂಡ ಕಾವ್ಯಳನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.