ಮಂಡ್ಯದ ವಿದ್ಯಾರ್ಥಿನಿಯನ್ನು ಪ್ರಶಂಸಿಸಿ ಅಲ್-ಖೈದಾ ವೀಡಿಯೊ ಪ್ರಕರಣ: ಮುಸ್ಕಾನ್ ತಂದೆ ಹೇಳಿದ್ದೇನು?
Photo: Video Screengrab
ಮಂಡ್ಯ: ಹಿಜಾಬ್ ವಿವಾದ ತಾರಕಕ್ಕೇರಿದ ಸಂದರ್ಭದಲ್ಲಿ ಕೇಸರಿಧಾರಿ ಯುವಕರ ಗುಂಪಿನಿಂದ ಸುತ್ತುವರಿದಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಳನ್ನು ಅಲ್ ಖೈದಾ ಮುಖಂಡ ಹೊಗಳಿದ್ದಾರೆನ್ನಲಾದ ವಿಚಾರದ ಕುರಿತಂತೆ ಮುಸ್ಕಾನ್ ತಂದೆ ಹುಸೇನ್ ಖಾನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ ಖೈದಾ ಮುಖಂಡ ಯಾರೆಂದೇ ತಿಳಿದಿಲ್ಲ ನನಗೆ, ನನ್ನ ಮಗಳನ್ನು ಹೊಗಳಿದ್ದಾರೆ ಎಂದು ಮಾಧ್ಯಮಗಳ ಮೂಲಕವೇ ತಿಳಿದಿದೆ. ಬೇರೆ ದೇಶದವರ ಹೊಗಳಿಕೆ ನಮಗೆ ಬೇಕಿಲ್ಲ ಎಂದು ಹುಸೇನ್ ತಿಳಿಸಿದ್ದಾರೆ ಎಂದು NDTV.COM ವರದಿ ಮಾಡಿದೆ.
ನಾವು ಈ ದೇಶದಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದೇವೆ, ನಮಗೆ ವಿದೇಶಿಯರ ಹೊಗಳಿಕೆ ಬೇಕಾಗಿಲ್ಲ, ಇದೆಲ್ಲಾ ತಪ್ಪು, ಗೊಂದಲ ಸೃಷ್ಟಿಸಿ ನಮ್ಮ ನಡುವೆ ಜಗಳ ತಂದಿಡಲು ಇಂತಹದ್ದನ್ನೆಲ್ಲಾ ಮಾಡಲಾಗುತ್ತಿದೆ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಅವರು ಹೇಳಿದ್ದಾರೆ.
ಅರಬ್ಬೀ ಭಾಷೆಯಲ್ಲಿ ಮಾತನಾಡಿರುವ ವ್ಯಕ್ತಿ ನಮ್ಮ ಮಗಳನ್ನು ಹೊಗಳಿದ್ದಾನೆ ಎಂಬುದು ಮಾಧ್ಯಮಗಳಿಂದ ಗೊತ್ತಾಗಿದೆ. ಆತನ ಹಿನ್ನೆಲೆಯೇ ನಮಗೆ ಗೊತ್ತಿಲ್ಲದ ಕಾರಣ ಅದರ ಬಗ್ಗೆ ಹೆಚ್ಚಿಗೆ ಏನನ್ನೂ ಮಾತನಾಡುವುದಿಲ್ಲ. ನಮಗೆ ನೆಮ್ಮದಿಯಾಗಿ ಬದುಕುವುದು ಮುಖ್ಯ. ಇವತ್ತು ಅವರು ಏನೋ ಹೇಳಿದ್ದಾರೆ, ನಾಳೆ ಇನ್ನೇನೋ ಹೇಳುತ್ತಾರೆ, ಅದಕ್ಕೆಲ್ಲಾ ನಾವು ತಲೆ ಕೊಡಕ್ಕಾಗುತ್ತಾ ? ನಮ್ಮ ಮನೆಗೆ ಬಂದು ತುಂಬಾ ಮಂದಿ ಉಡುಗೊರೆಗಳನ್ನು ಕೊಡುತ್ತಿದ್ದಾರೆ, ನಮಗೆ ಬೇಡ ಅಂದಿದ್ದೇವೆ, ರಮಝಾನ್ ಮುಗಿದ ಬಳಿಕ ಮಗಳಿಗೆ ಸಿಕ್ಕ ಎಲ್ಲಾ ಉಡುಗೊರೆಗಳನ್ನು ಸಾರ್ವಜನಿಕ ಸೇವೆಗಳಿಗೆ ಬಳಸಬೇಕು ಅಂದುಕೊಂಡಿದ್ದೇವೆ. ನಮಗೆ ಬೇಕಾದಷ್ಟು ದೇವರು ಕೊಟ್ಟಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಮಗಳಿಗೆ ಜೀವಕ್ಕೆ ಅಪಾಯವಿದೆ, ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೇ ಮಾಡುವಂತೆ ಪಿಇಎಸ್ ಆಡಳಿತ ಮಂಡಳಿಗೆ ಮನವಿ ಮಾಡಿದ್ದೇವೆ. ಆದರೆ ಅದಕ್ಕೆ ಅವರು ಅವಕಾಶ ಕೊಡಲಿಲ್ಲ. ಹಿಜಾಬ್ ಬೇಡಿಕೆ ಇಡುತ್ತಿಲ್ಲ, ವೇಲ್ ಧರಿಸಲು ಅವಕಾಶವನ್ನು ಕೇಲುತ್ತಿದ್ದೇವೆ, ಮಂಡ್ಯದ ಕಾಲೇಜಿನಲ್ಲೇ ಅವಕಾಶ ಸಿಕ್ಕರೆ ಇಲ್ಲಿ ಕಳುಹಿಸುತ್ತೇವೆ, ಇಲ್ಲದಿದ್ದರೆ ಮೈಸೂರಿನ ಕಾಲೇಜಿಗೆ ಕಳುಹಿಸುತ್ತೇವೆ ಎಂದಿದ್ದಾರೆ.
ಅಲ್ ಖೈದಾ ಮುಖ್ಯಸ್ಥನ ಹೇಳಿಕೆ ಕುರಿತು ಮುಸ್ಕಾನ್ ಏನನ್ನುತ್ತಾರೆ ಅನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಓದುವ ಮಕ್ಕಳಿಗೆ ಏನ್ ಗೊತ್ತಾಗುತ್ತೆ? ಅವರಿಗೆ ಇದರಲ್ಲೆಲ್ಲಾ ಆಸಕ್ತಿ ಇಲ್ಲ.. ಈ ಬಗ್ಗೆ ತನಿಖೆ ಆಗಬೇಕು ಅಂತಿದ್ದಾರೆ, ತನಿಖೆ ಆಗಲಿ, ಸರ್ಕಾರ ಇದೆ, ಕಾನೂನು ರೀತಿಯ ತನಿಖೆ ಮಾಡಲಿ. ನಮಗೆ ಅದರಲ್ಲೇನು ಸಂಬಂಧ ಇಲ್ದೆ ಇರೋದ್ರಿಂದ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.