VIDEO- ಬಿಎಸ್ ವೈ ಪುತ್ರ ವಿಜಯೇಂದ್ರ ಸಚಿವರಾದರೆ ಸಂತೋಷ: ಉಮೇಶ್ ಕತ್ತಿ
ಚಾಮರಾಜನಗರ: ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರ ಪುತ್ರ ಬಿ ವೈ ವಿಜಯೇಂದ್ರಗೆ ಸಚಿವ ಸ್ಥಾನ ಕೊಟ್ಟರೂ ಸಂತೋಷ. ಹಿರಿಯರಿಗೆ ಕೊಕ್ ಕೊಟ್ಟು ಅವರನ್ನು ಪಕ್ಷ ಸಂಘಟನೆಗೆ ನಿಯೋಜಿಸಿದರೆ ಅದನ್ನೂ ಸ್ವಾಗತಿಸುತ್ತೇನೆ. ನಾನು 9 ಬಾರಿ ಶಾಸಕನಾಗಿದ್ದೇನೆ, ಹಿರಿಯರು ಪಕ್ಷ ಸಂಘಟಿಸಬೇಕು ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ನಡೆದು ಹಿರಿಯರಿಗೆ ಕೊಕ್ ಕೊಟ್ಟರೂ ಸರಿ, ವಿಜಯೇಂದ್ರಗೆ ಸಚಿವ ಸ್ಥಾನ ಕೊಟ್ಟರೂ ಸರಿ.. ಎರಡನ್ನೂ ಸ್ವಾಗತ ಮಾಡುತ್ತೇನೆ. ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪುತ್ರರಾಗಿದ್ದು, ಪಕ್ಷ ಸಂಘಟನೆಗೆ ಬಲ ಬರಲಿದೆ ಎಂದು ಅಭಿಪ್ರಾಯಪಟ್ಟರು.
ಬೆಳಗಾವಿ ಜಿಲ್ಲೆಯನ್ನು ಜನರ ಅನುಕೂಲಕ್ಕಾಗಿ ವಿಭಜಿಸಬೇಕು, ಉಪ ವಿಭಾಗಾಧಿಕಾರಿ ಕಚೇರಿ ಇರುವ ಮೂರು ತಾಲೂಕುಗಳನ್ನು ಜಿಲ್ಲಾ ಕೇಂದ್ರವನ್ನಾಗಿಸಬೇಕು. ಶೀಘ್ರವೇ ಮುಖ್ಯಮಂತ್ರಿ ಅವರಿಗೆ ಜಿಲ್ಲೆಯನ್ನು ವಿಭಜಿಸಿಲು ಮನವಿ ಸಲ್ಲಿಸಲಾಗುವುದು, ಇದಕ್ಕೆ ಎಲ್ಲಾ ಶಾಸಕರ ಸಹಮತವೂ ಇದೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.
ಗೋಕಾಕ್ ಅನ್ನು ಜಿಲ್ಲಾಕೇಂದ್ರವಾಗಿ ಮಾಡಬೇಕೆಂದು ಪ್ರತಿಭಟಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನನಗೂ ಹುಕ್ಕೇರಿಯನ್ನು ಜಿಲ್ಲೆ ಮಾಡಬೇಕೆಂಬ ಆಸೆ ಇದೆ. ಆದರೆ, ಅವೆಲ್ಲಾ ಆಗಲ್ಲ. ಮೂರು ತಾಲೂಕುಗಳಲ್ಲಿ ಉಪವಿಭಾದಾಧಿಕಾರಿ ಕಚೇರಿಗಳಿದ್ದು, ಅವು ಜಿಲ್ಲೆಗಳಾಗಲಿವೆ ಎಂದು ಹೇಳಿದರು.