ಸಂತೋಷ್ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಚಿಂತನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಗದಗ, ಎ. 15: ‘ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಪರಿಹಾರ, ಪತ್ನಿಗೆ ಸರಕಾರಿ ನೌಕರಿ ಕೊಡುವ ಬಗ್ಗೆ ಬೆಂಗಳೂರಿಗೆ ಹೋಗಿ ಚಿಂತನೆ ನಡೆಸುತ್ತೇವೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಶುಕ್ರವಾರ ತೋಂಟದಾರ್ಯ ಮಠದಲ್ಲಿನ ತೋಂಟದ ಸಿದ್ದಲಿಂಗ ಸ್ವಾಮಿ ಐಕ್ಯ ಮಂಟಪ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಂತೋಷ್ ಕುಟುಂಬಕ್ಕೆ 2 ಕೋಟಿ ರೂ.ಪರಿಹಾರ ನೀಡಬೇಕು. ಜೊತೆಗೆ ಕಾಮಗಾರಿಯಾಗಿರುವ ಹಣವನ್ನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಬೇಡಿಕೆ ಇದ್ದು ಈ ಕುರಿತು ಚರ್ಚಿಸಲಾಗುವುದು' ಎಂದು ಸ್ಪಷ್ಟಪಡಿಸಿದರು.
‘ಮೃತ ಸಂತೋಷ ಪಾಟೀಲ್ ಪತ್ನಿಗೆ ಸರಕಾರಿ ನೌಕರಿ ನೀಡಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ. ಈ ಬಗ್ಗೆ ಆಲೋಚನೆ ಮಾಡಲಾಗುವುದು ಎಂದ ಅವರು, ಕೆ.ಎಸ್.ಈಶ್ವರಪ್ಪ ರಾಜೀನಾಮೆ ಕೇಳುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ. ಈಗಾಗಲೇ ಪ್ರಕರಣ ತನಿಖೆ ಪ್ರಗತಿಯಲ್ಲಿದ್ದು, ತನಿಖೆ ಆಗುವವರೆಗೂ ಸುಮ್ಮನಿರಬೇಕು. ಸತ್ಯ ಹೊರಬಲಿದೆ. ಪಕ್ಷದ ಹಿರಿಯರಿಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ' ಎಂದು ತಿಳಿಸಿದರು.