ಗದಗ: ಚೂರಿ ಇರಿದು ಯುವಕನ ಹತ್ಯೆ
ಗದಗ: ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ಚಾಕು ಇರಿದು ಓರ್ವ ವ್ಯಕ್ತಿಯನ್ನು ಕೊಂದ ಘಟನೆ ಗದಗ ನಗರದಲ್ಲಿ ನಡೆದಿದೆ. ನಗರದ ಬೆಟಗೇರಿಯ ಮಂಜುನಾಥ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಚೂರಿ ಇರಿತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಜೇಂದ್ರ(30) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಶಿವರಾಜ್ ಪೂಜಾರ್, ಮಲ್ಲೇಶ್ ಎಂಬುವವರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಶಿವರಾಜ್ ಪೂಜಾರ್ ಹಾಗೂ ಅವನ ಸ್ನೇಹಿತರಿಗೆ ಗಜೇಂದ್ರ ಸಿಂಗ್ ಹುಡುಗಿಯರಿಗೆ ಚುಡಾಯಿಸದಂತೆ ಬುದ್ದಿವಾದ ಹೇಳಿದ್ದಾರೆ. ಇದೇ ನೆಪದಲ್ಲಿ ಗಜೇಂದ್ರ-ಶಿವರಾಜ್ ಮಧ್ಯೆ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ. ನಿನ್ನೆ ಮಧ್ಯಾಹ್ನ ಚಾಕುವಿನಿಂದ ಹಲ್ಲೆ ಮಾಡಿ ಗಜೇಂದ್ರನ ಹತ್ಯೆಗೆ ಯತ್ನಿಸಿದ್ದಾರೆ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಗಜೇಂದ್ರ ಸಾವನ್ನಪ್ಪಿದ್ದಾರೆ ಎಂದು ತಿಳದು ಬಂದಿದೆ.
ಅದಾಗ್ಯೂ, ಗಜೇಂದ್ರ ಸಾವಿನ ಹಿಂದೆ ರಾಜಕೀಯ ದ್ವೇಷ ಕಾರಣ ಎಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಈ ಹಿಂದೆ ಗದಗ ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿದ್ದ ಗಜೇಂದ್ರ ಸಿಂಗ್, ನಾಲ್ಕನೇ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಕುಂತಲಾ ಅಕ್ಕಿ ಪರ ಪ್ರಚಾರ ಮಾಡಿದ್ದ. ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ದ್ವೇಷ ಕಾರುತಿದ್ದ ಶಿವರಾಜ್ ಪೂಜಾರ್ ಇಂದು ತನ್ನ ದ್ವೇಷ ತೀರಿಸಿಕೊಂಡಿದ್ದಾನೆ ಎಂದು ಶಿವರಾಜ್ ಪೂಜಾರ್ ವಿರುದ್ಧ ಗಜೇಂದ್ರ ಕುಟುಂಬಸ್ಥರು ಆರೋಪ ಮಾಡಿದ್ದಾರೆ.