ತುಮಕೂರಿನಲ್ಲಿ ದಲಿತ ಯುವಕರ ಹತ್ಯೆ ಪ್ರಕರಣ: ದಲಿತ ಹಕ್ಕುಗಳ ಸಮಿತಿ ಖಂಡನೆ
"ದಲಿತರ ಉದ್ಧಾರ ಕಂಡು ದುಷ್ಕೃತ್ಯ"
ಬೆಂಗಳೂರು, ಎ.28: ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಜಾತ್ರೆ ಸಮಯದಲ್ಲಿ ದಲಿತ ಯುವಕರ ಹತ್ಯೆಯಾಗಿರುವುದು ಖಂಡನೀಯವಾಗಿದ್ದು, ದಲಿತರು ಮುಂದೆ ಬರುವುದನ್ನು ಸಹಿಸಲಾಗದೇ ದಲಿತರ ಮೇಲೆ ಮನುವಾದಿಗಳು ಇಂತಹ ಕೃತ್ಯವನ್ನು ಮಾಡುತ್ತಿದ್ದಾರೆ ಎಂದು ದಲಿತ ಹಕ್ಕುಗಳ ಸಮಿತಿಯು ಖಂಡಿಸಿದೆ.
ಈ ಕುರಿತು ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಪ್ರಕಟನೆಯನ್ನು ಹೊರಡಿಸಿದ್ದು, ರಾತ್ರಿ ಹಬ್ಬದ ಸಂಭ್ರಮದಲ್ಲಿ ಊರಿನ ಕೆಲವು ಪಂಡರು ಊರ ಹೊರಗೆ ಗಿರೀಶ್ ಮೂಡಲಗಿರಿಯ್ಯ ಮತ್ತು ಗಿರೀಶ್ ಕೆಂಪಣ್ಣ ಎಂಬ ದಲಿತ ಯುವಕರನ್ನು ಥಳಿಸಿ ಬರ್ಬರವಾಗಿ ಹೊಡೆದು ಹತ್ಯೆ ಮಾಡಿದ್ದಾರೆ. ಈ ಕೊಲೆಗೆ ಕಾರಣ ಹುಡುಕಲು ದಲಿತ ಹಕ್ಕುಗಳ ರಾಜ್ಯ ಸಮಿತಿ ನಿಯೋಗ ಊರಿನ ದಲಿತ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ. ಎ.29ಕ್ಕೆ ತುಮಕೂರು ಎಸ್ಪಿ ಎದುರು ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದಲಿತ ಯುವಕರು, ಸಾರ್ವಜನಿಕ ಚಟುವಟಿಕೆಯಲ್ಲಿ ಮುಂಚೂಣಿಗೆ ಬರುತ್ತಿರುವುದನ್ನು ಜಾತಿವಾದಿ ಮನಸ್ಸುಗಳು ಸಹಿಸುತ್ತಿಲ್ಲ ಎಂಬುದು ಈ ಘಟನೆ ಸೇರಿದಂತೆ ಹಲವು ಸಂದರ್ಭದಲ್ಲಿ ಕಂಡಿದ್ದೇವೆ. ಈ ಜೋಡಿ ಕೋಲೆ ಸಂಚಿನಿಂದ ಕೂಡಿದೆ. ತಕ್ಷಣ ಪರಿಹಾರ ನೀಡಿ, ನ್ಯಾಯಬದ್ದ ತನಿಖೆಯನ್ನು ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.