ಕೊಳದ ಮಠದ ಶಾಂತವೀರ ಸ್ವಾಮೀಜಿ ನಿಧನ
ಬೆಂಗಳೂರು, ಎ. 30: ‘ಕೊಳದ ಮಠದ ಶಾಂತವೀರ ಸ್ವಾಮೀಜಿ ಅವರು ಹೃದಯಾಘಾತದಿಂದ ಇಂದಿಲ್ಲಿ ನಿಧನರಾಗಿದ್ದಾರೆ.
ಶ್ರೀಯುತರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ನಿನ್ನೆ ಆರೋಗ್ಯವಾಗಿಯೇ ಇದ್ದ ಶ್ರೀಗಳು ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದಿರುಗಿದ್ದು, ವಿಶ್ರಾಂತಿಯಲ್ಲಿದ್ದರು. ಬೆಳಗ್ಗೆ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಅಂತ್ಯಸಂಸ್ಕಾರವನ್ನು ಮಠದ ಆವರಣದಲ್ಲೇ ನೆರವೇರಿಸಲಾಗುವುದು ಎಂದು ಶ್ರೀಗಳ ಅಣ್ಣನ ಮಗ ಹರ್ಷ ಅವರು ತಿಳಿಸಿದ್ದಾರೆ. ಅಖಿಲ ಕರ್ನಾಟಕ ಬೇಡ ಜಂಗಮ ಸಂಸ್ಥೆಯ ಅಧ್ಯಕ್ಷರು, ಅಖಿಲ ಭಾರತ ಸಂಸ್ಕøತ ವಿದ್ಯಾಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರೂ ಆಗಿದ್ದ ಶ್ರೀಗಳು ಕೊಳದ ಮಠದ ಮಹಾಸಂಸ್ಥಾನದ ಮೂಲಕ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ತಮ್ಮನ್ನು ತೊಡಗಿಸಿಕೊಂಡಿದ್ದರು.
ಶ್ರೀಗಳ ನಿಧನಕ್ಕೆ ತುಮಕೂರು ಸಿದ್ದಗಂಗಾಮಠದ ಸಿದ್ದಲಿಂಗ ಸ್ವಾಮೀಜಿ, ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.