ಕಾಂಗ್ರೆಸ್ ನಾಯಕರು ಸಂತೆ ಭಾಷಣ ಬಿಟ್ಟು ದಾಖಲೆ ಕೊಡಲಿ: ಸಚಿವ ಆರ್.ಅಶೋಕ್
ಬೆಂಗಳೂರು, ಮೇ 5: ‘ಉತ್ತರ ಕರ್ನಾಟಕ ಭಾಗದಲ್ಲಿ ಸದ್ದು ಮಾಡುತ್ತಿದ್ದ ಪಿಎಸ್ಸೈ ನೇಮಕಾತಿ ಅಕ್ರಮವನ್ನು ಬೆಂಗಳೂರಿಗೆ ತಂದು ಸಚಿವ ಡಾ.ಅಶ್ವತ್ಥ ನಾರಾಯಣ ವಿರುದ್ಧ ಆರೋಪ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಮುಖಂಡರು ಚುನಾವಣೆ ವೇಳೆ ಗಿಮಿಕ್ ಮಾಡುತ್ತಿದ್ದಾರೆÉ' ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಗಿಮಿಕ್ ಮಾಡುವುದು ಕಾಂಗ್ರೆಸ್ಗೆ ರಕ್ತಗತವಾಗಿದೆ. ಪಿಎಸ್ಸೈ ಹಗರಣ ಕಂಡು ಹಿಡಿದಿದ್ದೇ ಗೃಹ ಸಚಿವರು. ಕಾಂಗ್ರೆಸ್ ಗೃಹಸಚಿವರನ್ನು ಅಭಿನಂದಿಸಬೇಕಿತ್ತು. ಆದರೆ ಯಾವುದೇ ದಾಖಲೆ ಇಲ್ಲದೆ ಸುಳ್ಳು ಆರೋಪ ಮಾಡಿದ್ದಾರೆ. ಹಿಂದೆ ಬಿಟ್ ಕಾಯಿನ್ನಲ್ಲೂ ಹೀಗೆ ಆರೋಪ ಮಾಡಿ ಶೂನ್ಯ ಆಗಿದ್ದ ಕಾಂಗ್ರೆಸ್ನವರು ಇನ್ನಾದರೂ ಸಂತೆ ಭಾಷಣ ಬಿಟ್ಟು ದಾಖಲೆ ಇದ್ದರೆ ಕೊಡಲಿ' ಎಂದು ಸವಾಲು ಹಾಕಿದರು.
‘ನಿಮ್ಮ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿರುವಾಗ ಬಿಜೆಪಿ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಹೇಳಲು ಬರಬೇಡಿ. ನಮ್ಮದು ಡಬಲ್ ಇಂಜಿನ್ ಸರಕಾರ. ಅಶ್ವತ್ಥನಾರಾಯಣ ಎಲ್ಲೂ ನಾನು ಸಿಎಂ ಆಗ್ತೀನಿ ಎಂದು ಹೇಳಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ. ಎಲ್ಲವೂ ಹೊರಗೆ ಬರಲಿ. ಈ ಪ್ರಕರಣದಲ್ಲಿ ಗೃಹ ಸಚಿವರ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದರು.