ರಸಗೊಬ್ಬರ, ಬಿತ್ತನೆಬೀಜ ಕೃತಕ ಅಭಾವ ಸೃಷ್ಟಿಸಿದರೆ ಮುಲಾಜಿಲ್ಲದೇ ಕ್ರಮ: ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ
ಬೆಂಗಳೂರು, ಮೇ 9: ಕೃತಕವಾಗಿ ಯಾರಾದರೂ ರಸಗೊಬ್ಬರ, ಬಿತ್ತನೆಬೀಜ ಅಭಾವ ಸೃಷ್ಟಿಸಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.
ಸೋಮವಾರ ನಗರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಸಗೊಬ್ಬರ ಬಿತ್ತನೆಬೀಜ ಕೊರತೆಯಾಗದಂತೆ ಹಂತಹಂತವಾಗಿ ನೋಡಿಕೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತನಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದರು.
2021-22ನೆ ಸಾಲಿನ ಮುಂಗಾರು ಹಂಗಾಮಿನಲ್ಲಿ 12.67 ಲಕ್ಷ ರೈತರು ಬೆಳೆವಿಮೆಗಾಗಿ ನೋಂದಣಿ ಮಾಡಿಕೊಂಡಿದ್ದು, ಇದರ ಪೈಕಿ ಈಗಾಗಲೇ ರಾಜ್ಯದ ವಿವಿಧೆಡೆ ಬಿತ್ತನೆ ವಿಫಲಗೊಂಡಲ್ಲಿ ಮಧ್ಯಂತರ ಬೆಳೆವಿಮಾ ನಷ್ಟ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳ ಅಡಿಯಲ್ಲಿ ಒಟ್ಟು 2.10 ಲಕ್ಷ ರೈತರಿಗೆ 135,72 ಕೋಟಿ ರೂ. ಬೆಳೆವಿಮೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದರು.
ಉಳಿದ ರೈತರ ಬೆಳೆ ವಿಮೆಯನ್ನು ಈಗಾಗಲೇ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೆಶನಾಲಯದಿಂದ ಬೆಳೆ ಇಳುವರಿ ಮಾಹಿತಿ ಬಂದಿದ್ದು, ಬೆಳೆ ಸಮೀಕ್ಷೆ ವಿವರವನ್ನು ತಾಳೆ ಮಾಡಲಾಗಿದ್ದು, ಇನ್ನು ಒಂದು ವಾರದೊಳಗೆ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು ಎಂದರು.
ಪಕ್ಷದ ವರಿಷ್ಠರು ಅವರ ಕರ್ತವ್ಯ ಮಾಡುತ್ತಾರೆ. ಅಂತೆಯೇ ಪಕ್ಷದ ಆಜ್ಞೆಯನ್ನು ನಾವು ಪಾಲಿಸುತ್ತಾ ನಮ್ಮ ಕರ್ತವ್ಯ ನಿಭಾಯಿಸುತ್ತೇವೆ. ಪಕ್ಷ ಸಂಘಟನೆ ಬೂತ್ ಮಟ್ಟದಲ್ಲಿ ಸಂಘಟನೆ ಚೆನ್ನಾಗಿದೆ. ನಮ್ಮ ಪ್ತಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಸಾಧನೆ, ಕಾರ್ಯವೈಖರಿ ನೋಡಿ ಬಹಳಷ್ಟು ಜನ ಬಿಜೆಪಿಯತ್ತ ವಾಲುತ್ತಿದ್ದಾರೆ. ಬಿಜೆಪಿ ಸರಕಾರದಲ್ಲಿ ಹೇಳಲು ಸಾಧನೆಗಳು ಸಾಕಷ್ಟು ಇವೆ ಎಂದು ತಿಳಿಸಿದರು.
ಕಾಂಗ್ರೆಸ್ನವರಿಗೆ ಆರೋಪ ಮಾಡುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಪ್ರಚಾರಕ್ಕಾಗಿ ಕಾಂಗ್ರೆಸ್ನವರು ಬರೀ ಆರೋಪ ಮಾಡುತ್ತಾರೆ. ಕೆಲವರಿಗೆ ಪ್ರಚಾರವೇ ಕಾಯಿಲೆ ಆಗಿದೆ. ಬಿಜೆಪಿಯಲ್ಲಿ ಶಿಷ್ಟಾಚಾರ ವ್ಯವಸ್ಥೆಯಿದೆ. ಬಿಜೆಪಿ ಬಿಟ್ಟರೆ ಬೇರೆ ಯಾವ ಪಕ್ಷದಲ್ಲೂ ಇಂತಹ ಶಿಸ್ತಿನ ವ್ಯವಸ್ಥೆ ಇಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪ್ರಧಾನಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಉಪಸ್ಥಿತರಿದ್ದರು.