ಮಹಿಳೆಗೆ ವಿಮೆ ನೀಡಲು ಸಬೂಬು ಹೇಳಿದ ಪ್ರಕರಣ: ಬಡ್ಡಿ ಸಮೇತ 20 ಲಕ್ಷ ನೀಡುವಂತೆ ಕೋರ್ಟ್ ಸೂಚನೆ
ಬೆಂಗಳೂರು, ಮೇ 16: ಸಣ್ಣ ಸಬೂಬು ಮುಂದಿಟ್ಟುಕೊಂಡು ಮಹಿಳೆಯೊಬ್ಬರಿಗೆ ಅವರ ಪತಿ ಸಾವಿನ ನಂತರ ಭಾರೀ ಮೊತ್ತದ ಹಣವನ್ನು ನೀಡಲು ನಿರಾಕರಿಸಿದ ಸಂಬಂಧ ಬೀದರ್ ಜಿಲ್ಲಾ ಗ್ರಾಹಕ ಕೋರ್ಟ್, ಸರಕಾರಿ ಸ್ವಾಮ್ಯದ ವಿಮಾ ಕಂಪೆನಿಗೆ ಬಡ್ಡಿ ಸಮೇತ 20 ಲಕ್ಷ ರೂ.ನೀಡುವಂತೆ ಸೂಚಿಸಿದೆ.
2018 ಡಿ.22ರ ಸಂಜೆ ಬೀದರ್ ನ ಔರಾದ್ ನಿವಾಸಿ ಧನರಾಜ್ ಮಡಿವಾಳಪ್ಪ ಅವರು ಬೋರಲ್ ಗ್ರಾಮದಲ್ಲಿರುವ ಹೊಟೇಲಿನಲ್ಲಿ ಪತ್ನಿಯ ಜತೆ ಊಟ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಟ್ರಕ್ ವಾಹನವೊಂದು ಇವರು ಕುಳಿತು ಊಟ ಮಾಡುತ್ತಿದ್ದ ಹೊಟೇಲಿಗೆ ನುಗ್ಗಿದ್ದು, ಧನರಾಜ್ ಮಡಿವಾಳಪ್ಪ ಸ್ಥಳದಲ್ಲಿಯೇ ಅಸುನೀಗಿದ್ದಾರೆ, ಪತ್ನಿ ಮಹಾದೇವಿ ಸಾವಿನಿಂದ ಪಾರಾಗಿದ್ದಾರೆ.
ಪತಿ ಧನರಾಜ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜನರಲ್ ಇನ್ಯೂರೆನ್ಸ್ ಕಂಪೆನಿಯಲ್ಲಿ ವರ್ಷಕ್ಕೆ ಸಾವಿರ ರೂಪಾಯಿ ಪ್ರೀಮಿಯಂ ಪಾವತಿಸುವಂತಹ ಪಾಲಿಸಿವೊಂದನ್ನು ತೆಗೆದುಕೊಂಡಿದ್ದರು. ಪತ್ನಿಯು ಪತಿ ಸಾವಿನ ನಂತರ ವಿಮೆ ನೀಡುವಂತೆ ವಿಮಾ ಕಂಪೆನಿ ಬಳಿ ಕೇಳಿಕೊಂಡಿದ್ದರು.
ಆದರೆ, ಎಸ್ಬಿಐ ವಿಮಾ ಕಂಪೆನಿಯು ಪಾಲಿಸಿದಾರರಾದ ಧನರಾಜ್ ಅವರು ಪ್ರೀಮಿಯಂ ತುಂಬಿಲ್ಲ ಎಂಬ ಸಬೂಬು ಹೇಳಿ ವಿಮೆ ನೀಡಲು ನಿರಾಕರಿಸಿದೆ. ಇದನ್ನು ಪ್ರಶ್ನಿಸಿ ಮಹಿಳೆಯು ಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಪೀಠವು ಎಸ್ಬಿಐ ಬ್ಯಾಂಕ್ ಕಡೆಯಿಂದ ಆಗಿರುವ ಸೇವಾ ನ್ಯೂನತೆ. ಅದನ್ನು ಸರಿಪಡಿಸಿಕೊಂಡು ಮಹಿಳೆಗೆ ಅರ್ಹವಾಗಿ ಸಲ್ಲಬೇಕಾದ ವಿಮಾ ಪರಿವಾರವನ್ನು ತಕ್ಷಣ ನೀಡಬೇಕೆಂದು ಸೂಚಿಸಿದೆ.