ಜಿಲ್ಲೆಯ ಸೌಹಾರ್ದ ಬದುಕಿಗೆ ಬೆಂಕಿಹಚ್ಚಲು ಬಿಡುವುದಿಲ್ಲ: ಡಾ.ಜಗದೀಶ್ ಕೊಪ್ಪ ಎಚ್ಚರಿಕೆ
ಕಾಳಿ ಸ್ವಾಮಿ, ಮುತಾಲಿಕ್ ಜಿಲ್ಲೆ ಪ್ರವೇಶ ನಿರ್ಬಂಧಕ್ಕೆ ಆಗ್ರಹಿಸಿ ಮಂಡ್ಯದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಮಂಡ್ಯ, ಮೇ 17: ಜಿಲ್ಲೆಯ ಭಾತೃತ್ವ, ಕೋಮು ಸೌಹಾರ್ದತೆಗೆ ಭಂಗ ತರಲು ಹೊರಟಿರುವ ಕಾಳಿಮಠದ ಋಷಿಕುಮಾರಸ್ವಾಮಿ ಪಾದಯಾತ್ರೆ ಜಿಲ್ಲೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಹಿರಿಯ ಪತ್ರಕರ್ತ, ಲೇಖಕ ಡಾ.ಜಗದೀಶ್ ಕೊಪ್ಪ ಹೇಳಿದರು.
ಋಷಿಕುಮಾರ್ ಸ್ವಾಮಿ ಮತ್ತು ಪ್ರಮೋದ್ ಮುತಾಲಿಕ್ ಜಿಲ್ಲಾ ಪ್ರವೇಶ ನಿರ್ಬಂಧಕ್ಕೆ ಆಗ್ರಹಿಸಿ ರೈತ, ದಲಿತ, ಪ್ರಗತಿಪರ ಸಂಘಟನೆಗಳು ಮಂಗಳವಾರ ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಜಿಲ್ಲೆಯ ಸೌಹಾರ್ದ ಬದುಕಿಗೆ, ಭಾತೃತ್ವಕ್ಕೆ ಬೆಂಕಿಹಚ್ಚಲು ಯಾವನಾದರೂ ಬಂದರೆ ನಾವು ಅಹಿಂಸಾ ಮಾರ್ಗ ದಾಟಬೇಕಾಗುತ್ತದೆ ಎಂದು ಎಚ್ಚರಿಸಿದರು.
‘ನಿಮಗೆ ಪ್ರಜಾಪ್ರಭುತ್ವದಲ್ಲಿ ಚುನಾವಣೆ ಎದುರಿಸಿ ನಮ್ಮ ಅಭ್ಯಂತರವಿಲ್ಲ. ಆದರೆ, ಅಧಿಕಾರಕ್ಕೇರಲು ಮಂಡ್ಯ ಜಿಲ್ಲೆಯ ಭಾತೃತ್ವದ ಸಂಬಂಧವನ್ನು ಹಾಳು ಮಾಡಲು ಹೋದರೆ ನಾವು ಎಲ್ಲರೂ ಒಗ್ಗಟ್ಟಾಗಬೇಕಾಗುತ್ತದೆ. ಮಿತಿಮೀರಿ ನಿಮ್ಮನ್ನು ಎದುರಿಸಬೇಕಾಗುತ್ತದೆ ಎಂದು ಅವರು ಗುಡುಗಿದರು.
ಯಾರವನು ಕಾಳಿಸ್ವಾಮಿ, ನೆನ್ನೆಮೊನ್ನೆ ಸಿನಿಮಾ ಥಿಯೇಟರ್ಗಳಲ್ಲಿ, ಶೂಟಿಂಗ್ಗಳಲ್ಲಿ ಚಡ್ಡಿ ಬಿಚ್ಚಿಕೊಂಡು ತಿರುಗಾಡುತ್ತಿದ್ದ ಮೂರನೆ ದರ್ಜೆಯ ಹಲಾಲ್ಕೋರ ಅವನು. ಇವತ್ತು ಖಾವಿ ಹಾಕಿದವರೆಲ್ಲಾ ಸ್ವಾಮೀಜಿಗಳು, ಖಾದಿ ತೊಟ್ಟವರೆಲ್ಲಾ ರಾಜಕೀಯ ನಾಯಕರು. ಇದರಾಚೆಗೆ ಇವರಿಗೆ ಮೀರಿದ ಅತ್ಯಂತ ಘನತೆಯ ಬದುಕನ್ನು ಮಂಡ್ಯ ಜಿಲ್ಲೆಯ ರೈತರು, ದಲಿತರು, ಕೃಷಿಕೂಲಿಕಾರರು ಬದುಕಿದ್ದಾರೆ. ಇವರಿಂದ ನಾವು ಕಲಿಯಬೇಕಾದುದ್ದು ಏನೂ ಇಲ್ಲ ಎಂದು ಅವರು ತಿರುಗೇಟು ನೀಡಿದರು.
ಯಾವುದೇ ಧರ್ಮಬೇಧವಿಲ್ಲದೆ ಈ ಜಿಲ್ಲೆಯ ಶೇ.99ರಷ್ಟು ಜನರು ನಮ್ಮ ಬೇಸಾಯಗಾರರ ಮನೆಯ ಮಕ್ಕಳಂತೆ ಇದ್ದಾರೆ. ಯಾವುದೇ ಸಮಸ್ಯೆ ಬಂದರೆ ಬಗೆಹರಿಸಿಕೊಳ್ಳುವಂತಹ ಪರಂಪರೆಯನ್ನು ನಮ್ಮ ಹಿರಿಯರು ಹಾಕಿಕೊಟ್ಟಿದ್ದಾರೆ. ಡಾ.ಬೆಸಗರಹಳ್ಳಿ ರಾಮಣ್ಣ, ಪ್ರೊ.ಎಚ್.ಎಲ್.ಕೇಶವಮೂರ್ತಿ ಅವರಂತಹವರ ಮಾರ್ಗದರ್ಶನದಿಂದಾಗಿ ಸಾಮರಸ್ಯ ಕೆಟ್ಟಿಲ್ಲ. ಬಂದ ಸಮಸ್ಯೆಗಳನ್ನು ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಈ ಜಿಲ್ಲೆಯ ಸೌಹಾರ್ದತೆ, ಸಂಸ್ಕೃತಿ, ಇತಿಹಾಸದ ಬಗ್ಗೆ ಮಾತನಾಡಲು ಬೇರೆ ಜಿಲ್ಲೆಯ ಈ ವ್ಯಕ್ತಿಗಳಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಅವರು ತರಾಟೆಗೆ ತೆಗೆದುಕೊಂಡರು.