ಕೋಳಿ ಸಾಗಾಣಿಕೆಯನ್ನು ಎಂಎನ್ಸಿ ಕಂಪನಿಗಳಿಗೆ ನೀಡುವ ಹುನ್ನಾರ: ರೈತ ಕ್ಷೇಮಾಭಿವೃದ್ಧಿ ಸಂಘ ಆರೋಪ
photo- pti (ಸಾಂದರ್ಭಿಕ ಚಿತ್ರ)
ಬೆಂಗಳೂರು, ಮೇ 17: ಕೋಳಿ ಸಾಗಾಣಿಕೆಯನ್ನು ಕೃಷಿ ಎಂದು ಪರಿಗಣಿಸುವಂತೆ ಮಾಡಿರುವುದು ಸ್ವಾಗತಾರ್ಹ ವಿಷಯವಾಗಿದೆ. ಆದರೆ ಈ ಕುರಿತು ರಚಿಸಿದ್ದ ಅಧಿಕಾರಿಗಳ ಸಮಿತಿ ಸಭೆಯಲ್ಲಿ ಚರ್ಚಿಸಿದ ಅಂಶಗಳು ರೈತರಿಗಿಂತ ಕಾರ್ಪೋರೇಟ್ ಕಂಪನಿಗಳಿಗೆ (ಎಂಎನ್ಸಿ) ಉಪಯೋಗವಾಗುತ್ತವೆ ಎಂದು ಅಖಿಲ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘ ಆರೋಪಿಸಿದೆ.
ಮಂಗಳವಾರ ಸಂಘದ ರಾಜ್ಯಾಧ್ಯಕ್ಷ ಕಾಚಾಪುರ ರಂಗಪ್ಪ ಅವರು ಮಾತನಾಡಿ, ಗರಿಷ್ಠ 10 ಎಕರೆ ಕೋಳಿ ಶೆಡ್ ನಿರ್ಮಾಣ ಮಾಡಲು 2 ಕೋಟಿ ಬಂಡವಾಳ ಬೇಕು. 5000 ಚದರ ಮೀಟರ್ ಅಡಿಯಲ್ಲಿ ಶೆಡ್ ನಿರ್ಮಾಣ ಮಾಡಲು ಅವಕಾಶನೀಡಿದೆ. ಇವು ರೈತರಿಂದ ಸಾಧ್ಯವಾಗದೇ, ಬಹುರಾಷ್ಟ್ರೀಯ ಕಂಪನಿಗಳಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಒಪ್ಪಂದದ ಮೇರೆಗೆ ಕೋಳಿ ಸಾಕಾಣಿಕೆ ಮಾಡುತ್ತಿರುವ ಖಾಸಗಿ ಸಂಸ್ಥೆಗಳಿಗೆ ಮಾಲಿನ್ಯ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸಲು ಜವಾಬ್ದಾರಿ ನಿಗದಿಪಡಿಸಲಾಗಿದೆ. ಇದರಿಂದ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂದು ಸಂಸ್ಥೆಗಳು ಆರೋಪಿಸಿ, ನೇರವಾಗಿ ಬಹುರಾಷ್ಟ್ರೀಯ ಕಂಪನಿಗಳು ಸ್ವಂತ ಸಾಕಾಣಿಕೆಯನ್ನು ಆರಂಭಿಸಬಹುದು. ಇದರಿಂದ ರೈತರಿಗೆ ನಷ್ಟವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.