ಹೆಡಗೆವಾರ್ ನೋಡಿ ವಿದ್ಯಾರ್ಥಿಗಳು ದ್ವೇಷ ಕಲಿಯಲ್ಲವೇ?: ಸಿದ್ದರಾಮಯ್ಯ
ಬೆಂಗಳೂರು, ಮೇ 18: ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲರಾಮ್ ಹೆಡಗೆವಾರ್ ಬಗ್ಗೆ, ಇವರ ಭಾಷಣ ಕೇಳಿ ವಿದ್ಯಾರ್ಥಿಗಳು ಏನು ಕಲಿಯುತ್ತಾರೆ, ದ್ವೇಷವನ್ನು ಅಲ್ಲವೇ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಗತ್ ಸಿಂಗ್ ಅಪ್ಪಟ ದೇಶಭಕ್ತ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬೆಳೆಸಬೇಕು. ಭಗತ್ ಸಿಂಗ್ರಂಥವರ ಬಗ್ಗೆ ಓದಿದರೆ ಮಕ್ಕಳಿಗೆ ದೇಶಾಭಿಮಾನ, ಸ್ಪೂರ್ತಿ ಬರುತ್ತದೆ. ಇವರ ಬಗೆಗಿನ ಪಾಠ ತೆಗೆದು ಹೆಡ್ಗೇವಾರ್ ಅವರ ಬಗ್ಗೆ ಪಾಠ ಸೇರಿಸಿದರೆ ಏನು ಉಪಯೋಗ ಎಂದರು.
ಅಲ್ಲದೆ, ದೇಶಕ್ಕೆ ಹೆಡಗೆವಾರ್ ಕೊಡುಗೆ ಏನು? ಜಾತೀಯತೆ ಪ್ರಚಾರ ಮಾಡಿದ್ದು, ಆರೆಸ್ಸೆಸ್ ಹುಟ್ಟುಹಾಕಿದ್ದು, ಹಿಂದುತ್ವ ಪ್ರಚಾರ ಮಾಡಿದ್ದು ಇವು ಹೆಡಗೆವಾರ್ ಮಾಡಿದ್ದು. ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರಾ, ಅವರು ಮಾತನಾಡಿರುವುದು ಬರೀ ದ್ವೇಷ ಭಾವನೆ ಬೆಳೆಸುವಂತವು, ಇವರ ಭಾಷಣ ಕೇಳಿ ವಿದ್ಯಾರ್ಥಿಗಳು ಏನು ಕಲಿಯುತ್ತಾರೆ, ದ್ವೇಷವನ್ನು ಅಲ್ಲವೇ ಎಂದು ಕೇಳಿದರು.
ಪಠ್ಯಕ್ರಮದಿಂದ ಭಗತ್ ಸಿಂಗ್ ಪಾಠ ಕೈಬಿಟ್ಟಿದ್ದರೆ ಕೂಡಲೇ ಸೇರಿಸಬೇಕು. ಯಾವುದೇ ಕಾರಣಕ್ಕೂ ಹೆಡ್ಗೇವಾರ್ ಜೀವನ, ವ್ಯಕ್ತಿತ್ವದ ಪಾಠವನ್ನು ಸೇರಿಸಬಾರದು ಎಂದು ಒತ್ತಾಯ ಮಾಡಿದರು.