ಪಠ್ಯವನ್ನು ಕೇಸರೀಕರಣಗೊಳಿಸುವುದು ಸರಿಯಲ್ಲ: ಅಡಗೂರು ಎಚ್.ವಿಶ್ವನಾಥ್
"ಶಿಕ್ಷಣ ತಜ್ಞರಲ್ಲದೇ ಇರುವವರು ಪಠ್ಯ ಪುಸ್ತಕ ಅಧ್ಯಕ್ಷರಾಗೋದು ದುರಂತ"
ಮೈಸೂರು: ಪಠ್ಯವನ್ನು ಕೇಸರೀಕರಣಗೊಳಿಸುವುದು ಸರಿಯಲ್ಲ, ಧರ್ಮ ಆಧಾರಿತ ಯಾವುದೇ ಪಠ್ಯ ಬೇಡ, ಹೆಡಗೆವಾರ್ ಯಾರು ಎಂಬುದೇ ಗೊತ್ತಿಲ್ಲ. ಆತನ ಪಾಠ ಸೇರಿಸಿದರೆ ಹೇಗೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಡಗೆವಾರ್ ಯಾರೆಂಬುದೇ ಗೊತ್ತಿಲ್ಲ, ಬಾಯಿಗೆ ಬಂದಹಾಗೆ ಯಾರ್ಯಾರದೋ ಪಾಠ ಸೇರಿದರೆ ಹೇಗೆ. ಪಠ್ಯಪುಸ್ತಕ ಪರಿಷ್ಕರಣೆ ರಾಜಕೀಯ ಸಂಘರ್ಷ ಅಲ್ಲ. ರೊಹಿತ್ ಚಕ್ರತೀರ್ತ ಯಾರು? ಸಂಘ ಪರಿವಾರದ ಕಾರ್ಯಕರ್ತ. ಶಿಕ್ಷಣ ತಜ್ಞರಲ್ಲದೇ ಇರುವವರು ಪಠ್ಯ ಪುಸ್ತಕ ಅಧ್ಯಕ್ಷರಾಗೋದು ದುರಂತ ಎಂದು ಕಿಡಿಕಾರಿದರು.
ಯಜ್ಞ ಕುಂಡ ಯಾವ ಕಡೆ ಇರಬೇಕು ಎಂದು ಪಠ್ಯ ಬೋಧನೆ ಮಾಡುವುದು ಯಾರಿಗೆ ಬೇಕು? ನಾರಾಯಣ ಗುರು ಸಾಮಾಜಿಕ ಕ್ರಾಂತಿಯ ಹರಿಕಾರ ಅವರ ಪಠ್ಯ ತೆಗೆಯುವುದು ತಪ್ಪು. ಹೆಡಗೆವಾರ್ ಟಿಪ್ಪುಗೆ ಹೋಲಿಕೆ ಮಾಡುವುದು ಸರಿಯಲ್ಲ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಎಂದು ಹೇಳಿದರು.
Next Story