ಮೂಡಿಗೆರೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕೂಲಿ ಕಾರ್ಮಿಕ ಮೃತ್ಯು
ಮೂಡಿಗೆರೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಪರಿಣಾಮ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಿಳಗಲಿ ಗ್ರಾಮದಲ್ಲಿ ಮಂಗಳವಾರ ವರದಿಯಾಗಿದೆ.
ಬಿಳಗಲಿ ಗ್ರಾಮದ ಸಂದೀಪ್ ಗೌಡ ಎಂಬವರ ಮನೆಯಲ್ಲಿ ದನ ಮೇಯಿಸಿಕೊಂಡಿದ್ದ ತಿಮ್ಮಪ್ಪ (55) ವಿದ್ಯುತ್ ಸ್ಪರ್ಶದಿಂದ ಮೃತರಾದ ಕಾರ್ಮಿಕ. ಈ ವೇಳೆ ಎರಡು ಹಸುಗಳೂ ವಿದ್ಯುತ್ ತಂತಿ ಸ್ಪರ್ಶಿಸಿ ಸತ್ತಿವೆ.
ಮಂಗಳವಾರ ಬೆಳಗ್ಗೆ ಎಂದಿನಂತೆ ದನ ಮೇಯಿಸಲು ತೆರಲುತ್ತಿದ್ದ ವೇಳೆ ನೆಲದ ಮೇಲೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ತುಳಿದಿದ್ದು, ಈ ವೇಳೆ ತಿಮ್ಮಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಬಾಳೂರು ಪೊಲೀಸರು, ಮೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Next Story