ಲಂಚಕ್ಕೆ ಬೇಡಿಕೆ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಎಸಿಬಿ ಬಲೆಗೆ
ಪಾಲಿಕೆ ಆಯುಕ್ತ
ಕಲಬುರಗಿ: ಕೊರೋನ ಸುರಕ್ಷಾ ಚಕ್ರದ ಬಾಕಿ ಬಿಲ್ ಮೊತ್ತ 7.5 ಲಕ್ಷ ರೂ. ಪಡೆಯಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಆಯುಕ್ತ ಶಂಕ್ರಣ್ಣ ವಣಿಕ್ಯಾಳ ಹಾಗೂ ಪಾಲಿಕೆ ಅಕೌಂಟೆಂಟ್ ಚೆನ್ನಪ್ಪ ಕೂಡ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕಮಿಷನರ್ ಶಂಕ್ರಣ್ಣ ವಣಿಕ್ಯಾಳ 2% ಪ್ರತಿಶತದಂತೆ 14 ಸಾವಿರ 500 ಲಂಚ ಪಡೆದಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಕೊರೋನ ಸುರಕ್ಷಾ ಚಕ್ರದ ನಿರ್ದೇಶಕ ಶರಣ್ ನೀಡಿದ ದೂರಿನ ಆಧಾರದ ಮೇಲೆ ಟ್ರ್ಯಾಪ್ ಮಾಡಲಾಗಿದ್ದು, ಪಾಲಿಕೆ ಅಕೌಂಟೆಂಟ್ ಚೆನ್ನಪ್ಪನಿಗೆ, ಶರಣ್ ಹಣ ನೀಡುತ್ತಿದ್ದವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಹಿಡಿದಿದ್ದಾರೆ. ಅಕೌಂಟೆಂಟ್ ಹಣ ಪಡೆದ ಬಳಿಕ ಎಸಿಬಿ ಅಧಿಕಾರಿಗಳ ಮುಂದೆ ಕಮಿಷನರ್ ಶಂಕ್ರಣ್ಣ ವಣಿಕ್ಯಾಳಗೆ ಕರೆ ಮಾಡಿ ಹಣ ಬಂದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಎಸಿಬಿ ದಾಳಿ ವೇಳೆ ಅಕೌಂಟಿಂಟ್ ಚನ್ನಪ್ಪ ಬಳಿ ಇನ್ನೂ 1ಲಕ್ಷ 45 ಸಾವಿರ ರೂ. ಪತ್ತೆಯಾಗಿದ್ದು, 1 ಲಕ್ಷ 45 ಸಾವಿರ ಕೂಡ ಕಮಿಷನರ್ ಗೆ ನೀಡೋದಕ್ಕೆ ಇಟ್ಟಿದ್ದ ಹಣ ಎಂದು ಒಪ್ಪಿಕೊಂಡಿದ್ದ ಅಕೌಂಟೆಂಟ್ ಚೆನ್ನಪ್ಪ ಮತ್ತು ಕಮಿಷನರ್ ನಡುವೆ ನಡೆದ ಆಡಿಯೋ ಸಂಭಾಷಣೆ ಕೂಡ ಎಸಿಬಿ ಅಧಿಕಾರಿಗಳು ಪಡೆದಿದ್ದಾರೆ.
ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಶಂಕರಪ್ಪ ವಣಿಕ್ಯಾಳ ಇತ್ತೀಚೆಗಷ್ಟೇ ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.