ರಾಜ್ಯದ ಜನರ ಚಡ್ಡಿ ಉದುರಿಸಲು ಹೋಗಬೇಡಿ: ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ (File Photo)
ಬೆಳಗಾವಿ, ಜೂ. 5: ‘ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾಂಗ್ರೆಸ್ ಚಡ್ಡಿ ಉದುರಿಸಿದ್ದೇವೆ ಎಂದಿದ್ದಾರೆ. ಆದರೆ, ಅವರ ಚಡ್ಡಿ ಬಿಚ್ಚಿದ್ರೆ ಏನ್ ಸಿಗುತ್ತದೆ. ನಿಮ್ಮ ನಿಮ್ಮ ಚಡ್ಡಿ ನೀವು ಉದುರಿಸಿಕೊಳ್ಳಿ. ರಾಜ್ಯದ ಜನರ ಚಡ್ಡಿ ಉದುರಿಸಲು ಹೋಗಬೇಡಿ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಸಲಹೆ ನೀಡಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿ ಭೇಟಿಗೆ ಸಮಯ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ದಿಲ್ಲಿಗೆ ಹೋಗಿ ಬರಿಗೈಯಲ್ಲಿ ಹಿಂದಿರುಗುತ್ತಿದ್ದಾರೆ. ಇಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗಿದೆ. ಸಿಎಂಗೆ ಗೌರವವೇ ಇಲ್ಲ. ಇದು ರಾಜ್ಯದ ಜನತೆಗೆ ಆಗುತ್ತಿರುವ ಅವಮಾನ' ಎಂದು ವಿಶ್ಲೇಷಿಸಿದರು.
‘ನವ ಕರ್ನಾಟಕ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಮಾತನಾಡುತ್ತಿದ್ದಾರೆ. ವಾಸ್ತವ ಹೀಗಿರುವಾಗ ಯಾವ ನವ ಕರ್ನಾಟಕ ನಿರ್ಮಾಣ ನಿಮ್ಮದು. ಯಾವುದೇ ಕೈಗಾರಿಕೆಗಳು ರಾಜ್ಯಕ್ಕೆ ಬರುತ್ತಿಲ್ಲ. ಕೇವಲ ಕಾಗದದ ಮೇಲೆ ಹೂಡಿಕೆ ಮಾಡುವ ಮಾತುಗಳನ್ನು ಆಡಿದರೆ ಆಗುವುದಿಲ್ಲ. ಬೆಂಗಳೂರಿನಲ್ಲಿ ಪ್ರವಾಹ ಬಂತು ಜನರಿಗೆ ಏನು ಮಾಡಿದೀರಿ' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.