ಪಿಎಸ್ಸೈ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಪೊಲೀಸ್ ಕಾನ್ಸ್ಟೇಬಲ್ಗಳಿಬ್ಬರ ಬಂಧನ
ಬೆಂಗಳೂರು, ಜೂ.6:ಪಿಎಸ್ಸೈ ಪರೀಕ್ಷೆ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ತನಿಖೆ ಮತ್ತಷ್ಟು ಚುರುಕುಗೊಳಿಸಿರುವ ಸಿಐಡಿ ಪೊಲೀಸರು, ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಕಲಾಸಿಪಾಳ್ಯ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಹರೀಶ್, ನೆಲಮಂಗಲ ಲೀಸ್ ಠಾಣೆಯ ಮೋಹನ್ ಕುಮಾರ್ ಬಂಧಿತರು ಎಂದು ತಿಳಿದುಬಂದಿದೆ.
ಸದ್ಯ ಬಂಧಿತರು ಮೋಸದಿಂದ ಪರೀಕ್ಷೆ ಬರೆದಿದ್ದ ಆಪಾದನೆ ಕೇಳಿಬಂದಿದೆ. ಅದರಲ್ಲೂ ಹೆಡ್ಕಾನ್ಸ್ಟೇಬಲ್ ಹರೀಶ್, ಹರ್ಷ, ಖಾಸಗಿ ವ್ಯಕ್ತಿ ಮನೋಜ್ ಎಂಬಾತನ ವಿರುದ್ಧ ಸಿಐಡಿ ಡಿವೈಎಸ್ಪಿ ಶಿವಕುಮಾರ್ ದೂರಿನ ಮೇರೆಗೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿಎಸ್ಸೈ ಪರೀಕ್ಷೆಯಲ್ಲಿ ಅಭ್ಯರ್ಥಿಯಾಗಿದ್ದ ಹರೀಶ್ 50 ಲಕ್ಷ ನೀಡಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ ಎನ್ನಲಾಗಿದ್ದು, ಮನೋಜ್ ಮುಖಾಂತರ ಸಿಐಡಿಯಲ್ಲಿ ಎಫ್ಐಡಿಯಾಗಿರುವ ಹರ್ಷ ಸಹಾಯದಿಂದ ಓಎಂಆರ್ ಶೀಟ್ ತಿದ್ದಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ. ಇನ್ನೂ, ಕೋರಮಂಗಲ ಠಾಣೆಯಲ್ಲಿ ಮೋಹನ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.