ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ದಿನಾಂಕ ತಿಂಗಳಾಂತ್ಯಕ್ಕೆ ಪ್ರಕಟ: ಸಚಿವ ಬಿ.ಸಿ. ನಾಗೇಶ್
ಬೆಂಗಳೂರು: 18 ಜೂ. 18: ‘ಜೂನ್ ತಿಂಗಳಾಂತ್ಯಕ್ಕೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಯಲಿವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ 2022ರ ಏಪ್ರಿಲ್/ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಸಚಿವ ನಾಗೇಶ್ ಅವರು ಬಿಡುಗಡೆ ಮಾಡಿದ ಬಳಿಕ ಮಾತನಾಡಿದರು.
‘2020ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ. 61.80ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ 61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿ ಫಲಿತಾಂಶದಲ್ಲಿ ಉತ್ತೀರ್ಣ ಪ್ರಮಾಣ 0.08ರಷ್ಟು ಏರಿಕೆಯಾಗಿದೆ’ ಎಂದು ಸಚಿವರು ಮಾಹಿತಿ ನೀಡಿದರು.
‘ಕೋವಿಡ್ ಭೀತಿಯ ನಡುವೆಯು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲಾಯಿತು. ಹೊಸ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 6,83,563 ವಿದ್ಯಾರ್ಥಿಗಳ ಪೈಕಿ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 48.71ರಷ್ಟು ವಿದ್ಯಾರ್ಥಿಗಳು, ವಾಣಿಜ್ಯ ಶೇ. 64.97ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ. 72.53ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ’ ಎಂದು ಸಚಿವರು ತಿಳಿಸಿದರು.
‘2020ರಲ್ಲಿ ನಗರ ಭಾಗದಲ್ಲಿನ ಕಾಲೇಜುಗಳ ಫಲಿತಾಂಶ ಉತ್ತಮವಾಗಿತ್ತು. ಈ ಬಾರಿ ಗ್ರಾಮಾಂತರ ಪ್ರದೇಶಗಳ ಕಾಲೇಜುಗಳ ಫಲಿತಾಂಶ ಉತ್ತಮವಾಗಿದೆ. ರಾಜ್ಯದ 56 ಕಾಲೇಜುಗಳಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ’ ಎಂದು ಸಚಿವರು ಮಾಹಿತಿ ನೀಡಿದರು.
‘91,106 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ 2,14,115, ದ್ವಿತೀಯ ದರ್ಜೆ 68,444 ಹಾಗೂ 49,301 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ’ ಎಂದು ಸಚಿವರು ತಿಳಿಸಿದರು.
‘ಹಿಂದಿನ ವರ್ಷಗಳಂತೆ ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿಯು ಉತ್ತೀರ್ಣ ಪ್ರಮಾಣ ಉತ್ತಮವಾಗಿದೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದ್ದರೆ, ಉಡುಪಿ ದ್ವಿತೀಯ ಸ್ಥಾನ ಹಾಗೂ ವಿಜಯಪುರ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ರಾಯಚೂರು, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳು ಕ್ರಮವಾಗಿ ಕೊನೆಯ ಮೂರು ಸ್ಥಾನದಲ್ಲಿವೆ. ಉತ್ತೀರ್ಣ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳ ಫಲಿತಾಂಶ ಸುಧಾರಣೆ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಸಚಿವರು ಹೇಳಿದರು.
‘ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಯನ್ನು ಪಡೆಯಲು ಇಂದಿನಿಂದಲೇ ಅವಕಾಶ ಕಲ್ಪಿಸಲಾಗಿದೆ. ಅನುತ್ತೀರ್ಣ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಫಲಿತಾಂಶಕ್ಕೆ ಕಾಯದೇ, ಪೂರಕ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸುವುದು ಉತ್ತಮ’ ಎಂದು ಸಚಿವರು ಸಲಹೆ ನೀಡಿದರು.
ಪರೀಕ್ಷೆಯನ್ನು ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಚಿವ ನಾಗೇಶ್ ಅವರು ದೂರವಾಣಿ ಕರೆ ಮಾಡಿ ಶುಭಾಶಯ ತಿಳಿಸಿದರು.
ಹಿನ್ನಡೆಯಾದವರು ನಿರಾಶರಾಗಬಾರದು: ‘ಫಲಿತಾಂಶದಲ್ಲಿ ಹಿನ್ನೆಡೆಯಾದವರು ನಿರಾಶರಾಗಬಾರದು. ಈ ಪರೀಕ್ಷೆಯೇ ಅಂತಿಮವಲ್ಲ. ಎಲ್ಲವನ್ನು ಧೈರ್ಯವಾಗಿ ಎದುರಿಸುವ ಮಾನಸಿಕತೆಯನ್ನು ಹೊಂದಬೇಕು. ಪರೀಕ್ಷೆ ಹಾಗೂ ಫಲಿತಾಂಶ ನಮ್ಮ ಶೈಕ್ಷಣಿಕ ಜೀವನದ ಒಂದು ಭಾಗವಷ್ಟೇ. ಪೂರಕ ಪರೀಕ್ಷೆ ಬರೆಯುವ ಮೂಲಕ ಯಶಸ್ಸು ಸಾಧಿಸಿ ಶೈಕ್ಷಣಿಕ ಜೀವನ ಮುಂದುವರೆಸಬೇಕು’ ಎಂದು ಸಚಿವರು ಕಿವಿ ಮಾತು ಹೇಳಿದರು.
ಪೂರಕ ಪರೀಕ್ಷೆ : 2022ನೇ ಸಾಲಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ದಿನಾಂಕ, ಅರ್ಜಿ ಸಲ್ಲಿಸುವ ದಿನಾಂಕ, ಅರ್ಜಿ ಕೊನೆಯ ದಿನ, ಶುಲ್ಕದ ಬಗ್ಗೆ ಸಂಪೂರ್ಣ ಮಾಹಿತಿಯಿರುವ ಸುತ್ತೋಲೆಯೊಂದನ್ನ ಹೊರಡಿಸಿದೆ. ಪುನರಾವರ್ತಿತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ, 2022ನೇ ಸಾಲಿನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ. ಎಲ್ಲಾ ಕಾಲೇಜಿನ ಪ್ರಾಂಶುಪಾಲರುಗಳು ಈ ಸುತ್ತೋಲೆಯನ್ನು ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಪಿಯು ಬೋರ್ಡ್ ಆದೇಶಿಸಿದೆ.
ಪರೀಕ್ಷೆಯಲ್ಲಿ ಹಿನ್ನಡೆಯಾದವರು ನಿರಾಶರಾಗಬಾರದು. ಪರೀಕ್ಷೆ, ಫಲಿತಾಂಶವೇ ಅಂತಿಮವಲ್ಲ. ಎಲ್ಲವನ್ನು ಧೈರ್ಯವಾಗಿ ಎದುರಿಸುವ ಮಾನಸಿಕತೆಯನ್ನು ಹೊಂದಬೇಕು.
— B.C Nagesh (@BCNagesh_bjp) June 18, 2022
ಪರೀಕ್ಷೆ ಮತ್ತು ಫಲಿತಾಂಶ ಶೈಕ್ಷಣಿಕ ಜೀವನದ ಒಂದು ಭಾಗವಷ್ಟೇ. ಪೂರಕ ಪರೀಕ್ಷೆ ಬರೆಯುವ ಮೂಲಕ ಯಶಸ್ಸು ಸಾಧಿಸಿ ಶೈಕ್ಷಣಿಕ ಜೀವನ ಮುಂದುವರೆಸಬೇಕು. ಪರೀಕ್ಷೆ ಮೀರಿದ ಜೀವನವನ್ನು ಮರೆಯಬಾರದು.