ಮೈಸೂರು; ಯೋಗ ದಿನಾಚರಣೆಯ ವೇದಿಕೆ ಕಾರ್ಯಕ್ರಮದಲ್ಲಿ ರಾಜವಂಶಸ್ಥರಿಗೆ ಅವಕಾಶ
ಮೈಸೂರು,ಜೂ.18: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ಮೈಸೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದು ವೇದಿಕೆಯಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಧಾನಿ ಮೋದಿಯವರ ಜೊತೆ ಯದುವೀರ ಅವರು ವೇದಿಕೆಯನ್ನು ಹಂಚಿಕೊಳ್ಳಲಿದ್ದು ವಿವಾದದ ಬಳಿಕ ಮೈಸೂರು ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಈ ಹಿಂದೆ ಮೋದಿಯವರ ಜೊತೆ ಯೋಗ ಮಾಡಲು ವೇದಿಕೆಯಲ್ಲಿ ಐವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿತ್ತು. ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಕೇಂದ್ರದ ಆಯುಷ್ ಮಂತ್ರಿಗೆ ಮಾತ್ರ ಅವಕಾಶ ವಿದೆ ಎಂದು ತಿಳಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಇದೀಗ ಗಣ್ಯರ ಪಟ್ಟಿಯಲ್ಲಿ ಯದುವೀರ ಹಾಗೂ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಹೆಸರನ್ನು ಸೇರಿಸಲಾಗಿದ್ದು, ಯೋಗಾಭ್ಯಾಸದ ನಂತರ ಅರಮನೆಯಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಆಹ್ವಾನದ ಮೇರೆಗೆ ಅರಮನೆಗೆ ಭೇಟಿ ನೀಡಲಿದ್ದು ಪ್ರಧಾನಿ ಮೋದಿಯವರು ಬೆಳಗಿನ ಉಪಹಾರ ಸೇವಿಸಲಿದ್ದಾರೆ. ಒಂದು ಗಂಟೆಗಳ ಕಾಲ ಮೈಸೂರು ಅರಮನೆಯ ರಾಜವಂಶಸ್ಥರ ಜೊತೆ ಮಾತುಕತೆ ನಡೆಸಲಿದ್ದಾರೆ.