ಸಿಡಬ್ಲ್ಯುಜಿ ತಂಡಕ್ಕೆ ಆಯ್ಕೆ ಮಾಡದ ಹಿನ್ನೆಲೆ: ಅರ್ಚನಾ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು, ಜೂ.22: ಕಾಮನ್ವೆಲ್ತ್ ಗೇಮ್ಸ್(ಸಿಡಬ್ಲ್ಯುಜಿ)ಗಾಗಿ ಆಯ್ಕೆ ಮಾಡಿರುವ ಭಾರತ ಟೇಬಲ್ ಟೆನಿಸ್ ತಂಡದಲ್ಲಿ ತಮಗೆ ಅವಕಾಶ ನೀಡದಿರುವುದನ್ನು ಪ್ರಶ್ನಿಸಿ ಸ್ಪರ್ಧಿಯಾದ ಬೆಂಗಳೂರಿನ ಅರ್ಚನಾ ಕಾಮತ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತಂತೆ ಅರ್ಚನಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಭಾರತೀಯ ಕ್ರೀಡಾ ಪ್ರಾಧಿಕಾರದ ಅನುಮತಿಗೆ ಒಳಪಟ್ಟಿರುವ ಆಯ್ಕೆ ಸಮಿತಿಯು ನಿಯಮಾವಳಿಗಳ ಅನುಸಾರವಾಗಿಯೇ ಅರ್ಚನಾರನ್ನು ಆಯ್ಕೆಪಟ್ಟಿಯಿಂದ ಕೈಬಿಟ್ಟಿದೆ ಎಂದು ಹೇಳಿದೆ.
ಅರ್ಚನಾ ಉತ್ತಮ ಪ್ರದರ್ಶನ ಕಾಯ್ದುಕೊಂಡಿದ್ದಾರೆ. ಆದರೂ ಅವರ ಹೆಸರನ್ನು ಕೈಬಿಡಲಾಗಿದೆ. ಆಯ್ಕೆಸಮಿತಿಯ ಕ್ರಮ ನಿರುಕುಂಶ ನೀತಿಯಿಂದ ಕೂಡಿದೆ. ಹೀಗಾಗಿ, ಭಾರತೀಯ ಮಹಿಳಾ ತಂಡದ ಪಟ್ಟಿಯಿಂದ ದಿವ್ಯಾ ಚಿತಲೆ ಹಾಗೂ ಸ್ವಸ್ತಿಕ್ ಘೋಷ್ ಹೆಸರು ತೆಗೆದುಹಾಕಿ, ಅರ್ಚನಾ ಹೆಸರನ್ನು ಸೇರಿಸಲು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.