ಮೈಸೂರು | ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಪತಿ
ಮೈಸೂರು, ಜೂ.28: ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡು ಪತಿಯೇ ತನ್ನ ಪತ್ನಿಯನ್ನು ರುಂಡಮುಂಡ ಬೇರ್ಪಡಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ಸೋಮವಾರ ಸಂಜೆ ನಡೆದಿರುವುದು ವರದಿಯಾಗಿದೆ.
ಮೈಸೂರು ತಾಲೂಕು ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು, ಪುಟ್ಟಮ್ಮ(40) ಕೊಲೆಯಾದ ಮಹಿಳೆ. ಈಕೆಯ ಪತಿ ದೇವರಾಜ್ ಕೊಲೆ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಟ್ಟಮ್ಮ ಈತನ ಎರಡನೇ ಪತ್ನಿಯಾಗಿದ್ದರು.
ಆರೋಪಿ ದೇವರಾಜ್ ಈ ಹಿಂದೆ ಮೊದಲ ಪತ್ನಿಯ ಬಗ್ಗೆಯೂ ಇದೇರೀತಿ ಅನುಮಾನಗೊಂಡು ಕೊಲೆಗೆ ಯತ್ನಿಸಿ ಜೈಲು ಸೇರಿದ್ದ. ಬಳಿಕ 20 ವರ್ಷಗಳ ಹಿಂದೆ ಪುಟ್ಟಮ್ಮರನ್ನು ಎರಡನೇ ಮದುವೆಯಾಗಿದ್ದ. ಇವರಿಗೆ 20 ವರ್ಷದ ಮಗಳಿದ್ದಾಳೆ. ಪುಟ್ಟಮ್ಮರ ಮೇಲು ದೇವರಾಜ್ ಆಗಾಗ ಅನುಮಾನ ವ್ಯಕ್ತಪಡಿಸಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಕಳೆದೊಂದು ತಿಂಗಳಿನಿಂದ ಈತನ ಹಿಂಸೆ ತೀವ್ರವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳು ಪವಿತ್ರಾ ಕಾಲೇಜಿಗೆ ಹೋಗಿದ್ದ ಸಂದರ್ಭದಲ್ಲಿ ಇದೇ ವಿಚಾರಕ್ಕೆ ದೇವರಾಜ್ ಕ್ಯಾತೆ ತೆಗೆದು ಪುಟ್ಟಮ್ಮರನ್ನು ಭೀಕರವಾಗಿ ಕೊಲೆ ಮಾಡಿ ರುಂಡಮುಂಡವನ್ನು ಬೇರ್ಪಡಿಸಿ ಪರಾರಿಯಾಗಿದ್ದಾನೆ. ಈ ಸಂಬಂಧ ದೇವರಾಜ್ ವಿರುದ್ಧ ಆತನ ಮಗಳು ವರುಣಾ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.