ನಾನು ಮಂಡ್ಯ ಬಿಡಲ್ಲ, ಬೆಂಗಳೂರಿನಿಂದ ಸ್ಪರ್ಧಿಸುತ್ತೇನೆ ಎಂಬುದು ಹಾಸ್ಯಾಸ್ಪದ ಮಾತು: ಸಂಸದೆ ಸುಮಲತಾ ಅಂಬರೀಶ್
''ರಾಜಕೀಯ ನನಗೆ ಅನಿವಾರ್ಯವಲ್ಲ, ನಾನು ರಾಜಕೀಯಕ್ಕೆ ಬಂದಿದ್ದು...''
ಸುಮಲತಾ ಅಂಬರೀಶ್
ಮಂಡ್ಯ, ಜೂ.28: 'ಬೆಂಗಳೂರು ಉತ್ತರ ಭಾಗದಿಂದ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂಬುದು ಹಾಸ್ಯಾಸ್ಪದ ಮಾತು' ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ತಮ್ಮ ಬಗ್ಗೆ ಮತ್ತು ತಮ್ಮ ಮಗ ಅಭಿಷೇಕ್ ರಾಜಕೀಯ ಜೀವನ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡಿದರು.
ನಾನು 2019ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿ ಮಂಡ್ಯದಿಂದ ಟಿಕೆಟ್ ಕೊಡಿ ಎಂದು ಕೇಳಿದ್ದಾಗ ಅಲ್ಲಿ ಆಗುವುದಿಲ್ಲ, ಬೆಂಗಳೂರು ಉತ್ತರ ಅಥವಾ ಬೆಂಗಳೂರು ದಕ್ಷಿಣ ಭಾಗದಲ್ಲಿ ನಿಂತುಕೊಳ್ಳಿ ನಾವು ಪ್ರಚಾರ ನಡೆಸಿ ನಿಂತು ಗೆಲ್ಲಿಸುತ್ತೇವೆ ಎಂದರು. ಆಗ ಬೇಡ ಎಂದವಳು ಈಗ ಏಕೆ ನಾನು ಬೆಂಗಳೂರು ಉತ್ತರ ಕ್ಷೇತ್ರ ಕೇಳಲಿ, ಇಂತಹ ಸುದ್ದಿಗಳೆಲ್ಲ ಹಾಸ್ಯಾಸ್ಪದ ಎಂದು ಅವರು ಹೇಳಿದರು.
ಹಲವು ಸವಾಲು ಸಂಕಷ್ಟಗಳ ನಡುವೆ ನಾನು ಮಂಡ್ಯ ಕ್ಷೇತ್ರದಲ್ಲಿ ನಿಂತು ಜನರ ಪ್ರೀತಿ ವಿಶ್ವಾಸಗಳಿಸಿ ಚುನಾವಣೆಯಲ್ಲಿ ಗೆದ್ದು ಬಂದಿದ್ದೇನೆ. ಹಾಗಾಗಿ ಇನ್ನು ಮುಂದೆಯೂ ಮಂಡ್ಯವನ್ನು ನಾನು ಬಿಡುವುದಿಲ್ಲ. ಮಂಡ್ಯವೂ ನನ್ನ ಬಿಡುವುದಿಲ್ಲ. ನಾನು ಮಂಡ್ಯ ಬಿಟ್ಟು ಹೋಗಲಿ ಎಂದು ಹಗಲು ಕನಸು ಕಾಣುವವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸುಮಲತಾ ಕಿಡಿಕಾರಿದರು.
ರಾಜಕೀಯ ನನಗೆ ಅನಿವಾರ್ಯವಲ್ಲ, ನಾನು ರಾಜಕೀಯಕ್ಕೆ ಬಂದಿದ್ದು ಮಂಡ್ಯ ಮತ್ತು ಇಲ್ಲಿನ ಜನರ ವಿಶ್ವಾಸ ಋಣವನ್ನು ತೀರಿಸಲು. ರಾಜಕಾರಣ ಬೇಕು ಎಂದು ದುರಾಸೆಯಿಂದ, ಅಧಿಕಾರಕ್ಕೋಸ್ಕರ ನಾನು ಮಂಡ್ಯ ಕ್ಷೇತ್ರದಿಂದ ನಿಂತಿದ್ದು ಅಲ್ಲ. ಆಗಲೇ ನನಗೆ ವಿಧಾನಪರಿಷತ್ ಸ್ಥಾನದ ಆಫರ್ ಕೊಟ್ಟಿದ್ದರು. ಬೆಂಗಳೂರು, ಮೈಸೂರು ಕ್ಷೇತ್ರಗಳಿಂದಲೂ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು, ಆದರೆ, ನಾನೇ ಮಂಡ್ಯವನ್ನೆ ಆಯ್ದುಕೊಂಡೆ ಎಂದರು.