ಉದಯಪುರದಲ್ಲಿ ನಡೆದ ಘಟನೆ ಅಮಾನವೀಯ: ಸೈಯ್ಯದ್ ತನ್ವೀರ್ ಹಾಶ್ಮಿ
ಸೈಯ್ಯದ್ ಮುಹ್ಮದ್ ತನ್ವೀರ್ ಹಾಶ್ಮಿ
ವಿಜಯಪುರ: ಉದಯಪುರದಲ್ಲಿ ನಡೆದ ಶಿರಚ್ಚೇಧನ ಘಟನೆ ಅತ್ಯಂತ ಖಂಡನೀಯ. ಅಮಾನವೀಯತೆಯ ನಿದರ್ಶನವಾಗಿದೆ ಎಂದು ಕರ್ನಾಟಕ ಜಮಾತ್-ಎ- ಅಹ್ಲೆ ಸುನ್ನತ್ ರಾಜ್ಯಾಧ್ಯಕ್ಷ ಹಾಗೂ ಖ್ಯಾತ ಧಾರ್ಮಿಕ ವಿದ್ವಾಂಸ ಹಝರತ್ ಮೌಲಾನ ಸೈಯ್ಯದ್ ಮುಹಮ್ಮದ್ ತನ್ವೀರ್ ಹಾಶ್ಮಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 'ಉದಯಪುರದಲ್ಲಿ ನಡೆದಿರುವ ಘಟನೆ ಅತ್ಯಂತ ನೋವು ತರಿಸಿದೆ, ಈ ರೀತಿಯ ಹಿಂಸೆಗೆ ಇಸ್ಲಾಂ ಧರ್ಮದಲ್ಲಿ ಅವಕಾಶವಿಲ್ಲ, ಪ್ರವಾದಿ ಹಝರತ್ ಮುಹ್ಮದ್ ಪೈಗಂಬರ್ ಅವರು ಶಾಂತಿಯ ತತ್ವವನ್ನೇ ಪ್ರಧಾನವಾಗಿ ಸಾರಿದ್ದಾರೆ. ಅನ್ಯಾಯವಾದರೆ ನ್ಯಾಯಾಲಯವಿದೆ, ಭಾರತೀಯ ಸಂವಿಧಾನ ನ್ಯಾಯ ಪಡೆದುಕೊಳ್ಳಲು ಶ್ರೇಷ್ಠವಾದ ನ್ಯಾಯದಾನ ವ್ಯವಸ್ಥೆ ರೂಪಿಸಿದೆ. ಈ ನ್ಯಾಯದಾನ ವ್ಯವಸ್ಥೆಯಡಿಯಲ್ಲಿ ನಾವು ಕೇಳಬೇಕು ಹೊರತು ಹಿಂಸೆಗೆ ಇಳಿಯುವುದು ತರವಲ್ಲ. ಈ ರೀತಿಯ ಉದಯಪುರ ಘಟನೆ ನೋವು ತರಿಸಿದೆ, ಇದು ಪ್ರತಿಯೊಬ್ಬರು ಖಂಡಿಸಲೇಬೇಕಾದ ಘಟನೆಯಾಗಿದೆ. ಪ್ರವಾದಿ ಮೊಹ್ಮದ್ ಪೈಗಂಬರ್ ಅವರು ಸಾರಿದಂತೆ ಒಬ್ಬ ಮಾನವನ ಕೊಲೆ, ಇಡೀ ಮಾನವೀಯತೆ ಕೊಲೆಯಾಗಿದೆ, ಹೀಗಾಗಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಅಮಾನೀವಯತೆಯ ಘಟನೆಯಾಗಿದೆ' ಎಂದು ತನ್ವೀರ್ ಹಾಶ್ಮಿ ಹೇಳಿಕೆ ನೀಡಿದ್ದಾರೆ.
'ಪ್ರವಾದಿ ಹಝರತ್ ಮುಹ್ಮದ್ ಪೈಗಂಬರ್ ಸೇರಿದಂತೆ ಯಾರೊಬ್ಬ ಮಹಾತ್ಮರ ವಿರುದ್ಧ ಹೇಳಿಕೆಗಳು ಕೇಳಿಬಂದರೆ ಅದರ ವಿರುದ್ಧ ಕಾನೂನಾತ್ಮಕವಾಗಿ ನಾವು ಹೋರಾಡಬೇಕು ಹೊರತು ಕಾನೂನುನ್ನು ಕೈಗೆತ್ತಿಕೊಳ್ಳುವ ಕೆಟ್ಟ ನಿರ್ಧಾರವನ್ನು ಕೈಗೊಳ್ಳಬಾರದು. ಭಾರತ ಭವ್ಯವಾದ ಭಾವೈಕ್ಯತೆ ದೇಶ, ಸಹೋದರತೆಯ ತಾಣ, ಗಂಗಾ-ಜಮನಾ ಭವ್ಯ ಸಂಸ್ಕೃತಿಯ ಪ್ರತೀಕವಾಗಿರುವ ಭಾರತದಲ್ಲಿ ಸಹೋದರತೆಯನ್ನು ಹಾಳು ಮಾಡಿ ಕೋಮುದ್ವೇಷ ಹರಡುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ, ಈ ಪ್ರಯತ್ನಕ್ಕೆ ಯಾರೂ ಬಲಿಯಾಗಬಾರದು, ನಾವು ಭಾರತೀಯರು, ಸಹೋದರರು ಎಂಬ ಭಾವ ಸದಾ ನಮ್ಮಲ್ಲಿ ಜಾಗೃತವಾಗಿರಬೇಕು' ಎಂದು ತನ್ವೀರ್ ಹಾಶ್ಮಿ ಹೇಳಿದ್ದಾರೆ.