ಬೀದಿ ನಾಯಿಗಳಿಂದ ನಾಗರಿಕರಿಗೆ ರಕ್ಷಣೆ ಒದಗಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಕರ್ತವ್ಯ: ಹೈಕೋರ್ಟ್
ಬೆಂಗಳೂರು, ಜೂ.29: ಬೀದಿ ನಾಯಿಗಳ ದಾಳಿಯಿಂದ ನಾಗರಿಕರನ್ನು ರಕ್ಷಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಕರ್ತವ್ಯವೆಂದು ಹೈಕೋರ್ಟ್ ಆದೇಶ ನೀಡಿದೆ.
ಬೆಳಗಾವಿ ಜಿಲ್ಲೆಯ ಬಾಳೆಕುಂದ್ರಿ ಗ್ರಾಮದ ಮೇಸ್ತ್ರಿ 32 ವರ್ಷದ ಯೂಸುಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್, 2018ರ ನವೆಂಬರ್ನಲ್ಲಿ ಬೀದಿನಾಯಿ ದಾಳಿಯಿಂದ ಮೃತಪಟ್ಟ ಅಬ್ಬಾಸ್ ಅಲಿ ಯೂಸುಬ್ ಕುಟುಂಬದವರಿಗೆ 10 ಲಕ್ಷ ರೂ.ಪರಿಹಾರ ನೀಡಬೇಕು ಹಾಗೂ 20 ಸಾವಿರ ರೂ.ಕಾನೂನು ಹೋರಾಟದ ವೆಚ್ಚ ಭರಿಸಬೇಕೆಂದು ಬೆಳಗಾವಿ ಜಿಪಂಗೆ ಆದೇಶಿಸಿದೆ.
ಜತೆಗೆ ನಾಯಿಗಳ ದಾಳಿಯಿಂದ ನಾಗರಿಕರನ್ನು ರಕ್ಷಿಸಲು ಸ್ಥಳೀಯ ಸಂಸ್ಥೆಗಳು ಬದ್ದವಾಗಿರಬೇಕೆಂದು ಆದೇಶಿಸಿದೆ. ತನ್ನ ಕಿರಿಯ ಮಗ ಅಬ್ಬಾಸ್ ಅಲಿ ಯೂಸುಬ್ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಬೀದಿನಾಯಿಗಳ ದಾಳಿಯಿಂದ ಸಾವನ್ನಪ್ಪಿದ್ದಕ್ಕಾಗಿ ಅರ್ಜಿದಾರರು ಅಧಿಕಾರಿಗಳಿಂದ 25 ಲಕ್ಷ ಪರಿಹಾರವನ್ನು ಕೋರಿದ್ದರು.
ಬೀದಿ ನಾಯಿಗಳ ಜನನ ನಿಯಂತ್ರಣ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ರೋಗಪೀಡಿತ ನಾಯಿಗಳಿಗೆ ದಯಾಮರಣ ಕ್ರಮ ಕೈಗೊಳ್ಳಬೇಕು. ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚುವ ನಾಯಿಗಳ ಉಪಟಳ ನಿವಾರಿಸಬೇಕೆಂದು ನ್ಯಾಯಪೀಠವು ಸೂಚನೆ ನೀಡಿದೆ.