'ನಾಲ್ವರ ಮೇಲೆ ಹೋಗುವ ಕಾಲ ಹತ್ತಿರದಲ್ಲಿದೆ': ದೇವೇಗೌಡರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಶಾಸಕ ರಾಜಣ್ಣ
ಕೆ.ಎನ್.ರಾಜಣ್ಣ- ಮಾಜಿ ಶಾಸಕ
ತುಮಕೂರು: ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಬಗ್ಗೆ ನೀಡಿರುವ ಹೇಳಿಕೆಯೊಂದು ಚರ್ಚೆಗೆ ಗ್ರಾಸವಾಗಿದೆ.
ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಣ್ಣ, ದೇವೇಗೌಡರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ. ನಾಲ್ವರ ಮೇಲೆ ಹೋಗುವ ಕಾಲ ಹತ್ತಿರದಲ್ಲಿದೆ’ ಎಂದು ಹೇಳಿದ್ದಾರೆ.
'ನನ್ನದು ಇದು ಕೊನೆಯ ಚುನಾವಣೆ. ನನಗೆ ಈಗಾಗಲೇ 72 ವರ್ಷ ಇನ್ನು ಐದು ವರ್ಷ ಆದ ಮೇಲೆ ಕೈ ಕಾಲು ಎಲ್ಲ ಅಲ್ಲಾಡ್ತಿರ್ತವೆ' ಎಂದು ಹೇಳುತ್ತಿದ್ದಂತೆ ಅಲ್ಲಿದ್ದವರು ಒಬ್ಬರು ದೇವೇಗೌಡರ ಕುರಿತು ಪ್ರಸ್ತಾಪಿಸಿದಾಗ, ' ದೇವೇಗೌಡರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗ್ತವರೆ, ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ' ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರಜ್ವಲ್ ರೇವಣ್ಣ, ರಾಜಣ್ಣ ಅವರು ಜನಪ್ರತಿನಿಧಿಯಾಗಲು ಲಾಯಕ್ಕಿಲ್ಲ ಅಂತಾನೇ ಮಧುಗಿರಿ ಜನ ಮನೆಗೆ ಕಳುಹಿಸಿರುವುದು. ರಾಜಣ್ಣ ಅವರ ಕುರಿತು ಇಡೀ ಜಗತ್ತಿಗೆ ಗೊತ್ತು. ಇದಕ್ಕೆಲ್ಲ ದೇವರು ಉತ್ತರ ಕೊಡ್ತಾನೆ ಎಂದು ಹೇಳಿದ್ದಾರೆ.