ಹಾಸನ: ಖಾಯಮಾತಿ ಆಗ್ರಹಿಸಿ 2ನೇ ದಿನದ ಪ್ರತಿಭಟನೆಯಲ್ಲಿ ವಿಷ ಕುಡಿಯಲು ಮುಂದಾದ ಪೌರಕಾರ್ಮಿಕ
ವಿಷದ ಬಾಟಲುಗಳನ್ನು ವಶಪಡಿಸಿಕೊಂಡ ಪೊಲೀಸರು, ಸಂಘಟಕರು
ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಮುಷ್ಕರ 2ನೇ ದಿನಕ್ಕೆ ಕಾಲಿಟ್ಟಿದ್ದು, ಈ ವೇಳೆ ಕಾರ್ಮಿಕನೋರ್ವ ವಿಷ ಕುಡಿಯಲು ಮುಂದಾದಾಗ ಸಂಘಟನೆಯವರು ಹಾಗೂ ಪೊಲೀಸರು ಮಧ್ಯ ಪ್ರವೇಶಿಸಿ 11 ವಿಷದ ಬಾಟಲನ್ನು ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.
ನಗರದ ಜಿಲ್ಲಾಧಿಕಾರಿ ಕಛೇರಿ ಮುಂದೆ ನಡೆಸಲಾಗುತ್ತಿರುವ ಪೌರಕಾರ್ಮಿರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಈ ವೇಳೆ ಕಾರ್ಮಿಕನೋರ್ವ ವಿಷ ಕುಡಿಯಲು ಮುಂದಾದರು. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಷದ ಎಲ್ಲಾ ಡಬ್ಬಿಯನ್ನು ಕಸಿದುಕೊಂಡು ವಶಪಡಿಸಿಕೊಂಡರು. ಪೌರಕಾರ್ಮಿಕರ ಬೇಡಿಕೆಯನ್ನು ಈಡೇರಿಸುವುದಾಗಿ ಸರಕಾರದ ಮಟ್ಟದಲ್ಲಿ ಹೇಳಲಾಗಿದ್ದರೂ ನಮಗೆ ಬರವಣಿಗೆಯಲ್ಲಿ ಕೊಡುವಂತೆ ಇದೆ ವೇಳೆ ಆಗ್ರಹಿಸಿದರು.
ಪೌರಕಾರ್ಮಿಕರಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ಉಚಿತವಾಗಿ ಮನೆಗಳನ್ನು ನೀಡಬೇಕು. ಕಸ ಸಾಗಿಸುವ ವಾಟರ್ಮೆನ್, ಡೇಟಾ ಅಪರೇಟರ್, ಯು.ಜಿ.ಡಿ. ವಾಹನ ಚಾಲಕರು, ಕ್ಲೀನರ್, ಸ್ಮಶಾನ ಕಾವಲುಗಾರರು ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಬದಲು ಪೌರಕಾರ್ಮಿಕರ ಮಾದರಿಯಲ್ಲಿ ನೇರ ಕಾರ್ಮಿಕರು, ಲೋಡರ್ ನೇಮಕಾತಿ ಜಾರಿಗೊಳಿಸಬೇಕು . ನೇರಪಾವತಿ ಪೌರಕಾರ್ಮಿಕರು ಅಕಾಲಿಕ ಮರಣ ಹೊಂದಿದ್ದಲ್ಲಿ ಅವರ ಮನೆಯ ಸದಸ್ಯರೊಬ್ಬರಿಗೆ ಖಾಯಂ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ನೇರಪಾವತಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶೇಕಡ 2 ಮೀಸಲಾತಿ ನೀಡುವುದು, ಸಫಾಂಬ ಕರ್ಮಚಾಲಿ ಜಾಗೃತಿ ಸಮಿತಿಗೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಪೌರಕಾರ್ಮಿಕರ ಮಾದರಿಯಲ್ಲಿಯೇ ನೇರಪಾವತಿ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಗೌರವಾಧ್ಯಕ್ಷ ಹೆಚ್.ಪಿ. ಶಂಕರ್ ರಾಜು, ಹೆತ್ತೂರ್ ನಾಗರಾಜು, ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲೋಕೇಶ್, ಹೆಚ್.ಆರ್. ಕುಮಾರ್, ವಸಂತಕುಮಾರ್, ಮಾರಾ ಇತರರು ಉಪಸ್ಥಿತರಿದ್ದರು.