ಮಕ್ಕಳಿಗೆ ಬೈಸಿಕಲ್, ಶ್ಯೂ, ಸಾಕ್ಸ್ ನೀಡದ್ದು ನಿಜಕ್ಕೂ ವಿಷಾದನೀಯ: ನಿರಂಜನಾರಾಧ್ಯ
ಬೆಂಗಳೂರು, ಜು.7: ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬೈಸಿಕಲ್, ಶೂ ಮತ್ತು ಸಾಕ್ಸ್ನ್ನು ಆಯವ್ಯಯದಲ್ಲಿ ಮಂಜೂರು ಮಾಡದೇ, 2022-23ನೇ ಸಾಲಿಗೆ ಈ ಉಚಿತ ಸೌಲಭ್ಯವನ್ನು ಒದಗಿಸಲು ಸರಕಾರಕ್ಕೆ ಸಾಧ್ಯವಾಗದಿರುವುದು ನಿಜಕ್ಕೂ ವಿಷಾದನೀಯ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಖಂಡಿಸಿದೆ.
ಈ ಕುರಿತು ಪ್ರಕಟನೆ ಹೊರಡಿಸಿದರುವ ವೇದಿಕೆಯ ಮಹಾಪೋಷಕ ನಿರಂಜನಾರಾಧ್ಯ ವಿ.ಪಿ. ಅವರು, ಮಕ್ಕಳು ಗೌರವ ಮತ್ತು ಆತ್ಮಾಭಿಮಾನದಿಂದ ಸಮವಸ್ತ್ರ ಧರಿಸಿ, ಶೂ ಮತ್ತು ಸಾಕ್ಸ್ ಹಾಕಿಕೊಂಡು ಸಂವಿಧಾನ ನೀಡಿದ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕನ್ನು ಪಡೆದ ಹೆಮ್ಮೆಯಲ್ಲಿ ತಲೆ ಎತ್ತಿ ಶಾಲೆಗೆ ಹೋಗುತ್ತಿದ್ದರು. ಆದರೆ ಅವರ ಶೂ ಮತ್ತು ಸಾಕ್ಸ್ ಹಾಗು ಬೈಸಿಕಲ್ ಹಕ್ಕನ್ನು ಕಸಿದಿರುವ ಸರಕಾರ, ಮಕ್ಕಳು ಬರಿಗಾಲಿನಲ್ಲಿ ಹೋಗುವಂತೆ ಮಾಡಿದೆ. ಸರಕಾರದ ಈ ನಡೆಯಿಂದ ನಮ್ಮ ಮಕ್ಕಳಿಗೆ ಘೋರ ಅನ್ಯಾಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸರಕಾರ ಮಕ್ಕಳಿಗೆ ಸಂವಿಧಾನ ದತ್ತವಾಗಿ ಸಿಕ್ಕಿರುವ ಮೂಲಭೂತ ಹಕ್ಕನ್ನು ಗೌರವಿಸಿ, ಉಚಿತ ಶೂ ಮತ್ತು ಸಾಕ್ಸ್ ಹಾಗೂ ಬೈಸಿಕಲ್ ವಿತರಣೆಗೆ ಕ್ರಮವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.