ಮತ ಖರೀದಿಸುವವರನ್ನು ಬಹಿಷ್ಕರಿಸಿ: ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ
''ಕಾರ್ಪೊರೇಟರ್ ಆಗಲು 20 ಕೋಟಿ ರೂ. ಖರ್ಚು ಮಾಡುತ್ತಾರೆ'' ► ಕೋಲಾರದಲ್ಲಿ ಭ್ರಷ್ಟರಹಿತ ಚುನಾವಣಾ ವ್ಯವಸ್ಥೆಗೆ ಸ್ವಾಭಿಮಾನಿ ಆಂದೋಲನ
ಕೋಲಾರ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರರನ್ನು ಹಣಕ್ಕೆ ಕೊಂಡುಕೊಳ್ಳುವವರನ್ನು ಚುನಾವಣೆ ವ್ಯವಸ್ಥೆಯಿಂದ ಬಹಿಷ್ಕರಿಸುವಂತ ಆಂದೋಲನವನ್ನು ಕೋಲಾರದಿಂದ ಆರಂಭಗೊಳಿಸಿ ದೇಶಾದ್ಯಂತ ಮಾಡಬೇಕಾಗಿದೆ ಎಂದು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದ್ದರೆ.
ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಸ್ವಾಭಿಮಾನಿ ಕೋಲಾರ ಆಂದೋಲನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಚುನಾವಣೆಯ ವ್ಯವಸ್ಥೆಯಲ್ಲಿ ಮತಗಳನ್ನು ಸರಕು ಮಾಡಿಕೊಂಡು ಜನರಿಗೆ ಹಣ ಹಂಚಿ ಖರೀದಿಸುತ್ತಿರುವ ರಾಜಕಾರಣಿಗಳು ಗೆದ್ದ ಮೇಲೆ ಅಭಿವೃದ್ಧಿ ಕೆಲಸಗಳಲ್ಲಿ ಪರ್ಸೆಂಟೇಜ್ ರೂಪದಲ್ಲಿ ವಸೂಲಿ ಮಾಡುತ್ತಿದ್ದಾರೆ. ಭ್ರಷ್ಟರಹಿತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದಲ್ಲಿ ಕೆಲವು ಪಕ್ಷಗಳು ಅಧಿಕಾರದ ಆಸೆಗಾಗಿ ಈ.ಡಿ ಪ್ರಕರಣದ ಬೆದರಿಕೆ ಹಾಕಿ ಶಾಸಕರನ್ನು ಸೆಳೆದು, ಕಾನೂನುಬದ್ಧವಾಗಿ ರಚನೆಯಾಗಿರುವ ಸರ್ಕಾರ ಬೀಳಿಸುವ ಹೊಸ ವ್ಯವಸ್ಥೆ ದೇಶದಲ್ಲಿ ಬಂದಿದೆ, ಗ್ರಾಪಂ ಚುನಾವಣೆ ಗೆಲ್ಲಲು ಕನಿಷ್ಠ 10 ಲಕ್ಷದಿಂದ ಕೋಟಿ ರೂ.ವರೆಗೆ ಖರ್ಚು ಮಾಡುತ್ತಿದ್ದಾನೆ.
ಕಾರ್ಪೊರೇಟರ್ ಆಗಲು 20 ಕೋಟಿ ರೂ. ಖರ್ಚು ಮಾಡುತ್ತಾರೆ. ಎಲ್ಲಾ ಹಂತಗಳಲ್ಲೂ ಎಲ್ಲಾ ರಾಜಕೀಯ ಪಕ್ಷಗಳು ಹಣ ನೀಡುತ್ತಾರೆ ಜೊತೆಗೆ ಕೆಲವು ಆಸೆ ಆಮಿಷಗಳಿಗೆ ಮತವನ್ನೂ ಖರೀದಿಸುತ್ತಿದ್ದಾರೆ. ಅಷ್ಟು ಹಣ ಚೆಲ್ಲಿ ಗೆದ್ದ ಮೇಲೆ ಸರ್ಕಾರದ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಶೇ 10 ರಿಂದ ಶೇ 40 ಪರ್ಸೆಂಟೇಜ್ ಪಡೆಯುತ್ತಾರೆ. ಇದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಹೇಳಿದ್ದಾರೆ ಎಂದರು.
ರಾಜ್ಯದಲ್ಲಿ ವರ್ಗಾವಣೆಯಲ್ಲಂತೂ ಕೋಟ್ಯಂತರ ರೂಪಾಯಿ ಹರಿದಾಡುತ್ತಿದೆ. ಎಸಿಪಿ, ಎಸ್ಐ, ತಹಶೀಲ್ದಾರ್, ಉಪನೋಂದಣಾಧಿಕಾರಿ, ಜಿಲ್ಲಾ„ಕಾರಿಗಳು ಶಾಸಕರಿಗೆ, ಮಂತ್ರಿಗಳಿಗೆ ಕೋಟ್ಯಂತರ ಹಣ ನೀಡಿ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಅಧಿಕಾರಿಗಳು ಜನರಿಂದ ಹಣ ಹೀರುತ್ತಾರೆ. ಇಡೀ ಸಮಾಜ ಲಂಚಮಯವಾಗಿದೆ. ಜೈಲಿನಲ್ಲಿರಬೇಕಾದವರು ಹೊರಗಿದ್ದಾರೆ. ಖುಲಾಸೆ ಆಗಬೇಕಾದವರು ಜೈಲಿನಲ್ಲಿದ್ದಾರೆ ಇದು ನಮ್ಮ ಸಮಾಜದ ನಿಜವಾದ ವ್ಯವಸ್ಥೆ ಎಂದರು.
ಸಂಸತ್ತಿನಲ್ಲಿ ಹಾಗೂ ಶಾಸಕಾಂಗ ವ್ಯವಸ್ಥೆಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ಗಳು ಕೈಗಾರಿಕೋದ್ಯಮಿಗಳು ಚುನಾವಣೆಗೆ ನಿಂತು ಗೆಲ್ಲುತ್ತಿದ್ದಾರೆ. ಅವರಿಗೆ ಜನಸಾಮಾನ್ಯರ ಮೇಲೆ ಕಾಳಜಿ ಬರಲು ಹೇಗೆ ಸಾಧ್ಯ ಸರ್ಕಾರ ಮಾಡಬೇಕಾದ ಕೆಲಸಗಳನ್ನು ಖಾಸಗಿಯವರಿಗೆ ವಹಿಸಲಾಗುತ್ತಿದೆ. ಹೀಗಾಗಿ, ಖಾಸಗಿ ಶಾಲೆ, ಖಾಸಗಿ ಆಸ್ಪತ್ರೆ ಹೆಚ್ಚುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 20 ಸಾವಿರ ಖರ್ಚಾದರೆ, ಅದೇ ಸಮಸ್ಯೆಗೆ ಖಾಸಗಿ ಆಸ್ಪತ್ರೆಯಲ್ಲಿ 5 ಲಕ್ಷ ವಸೂಲಿ ಮಾಡುತ್ತಾರೆ' ಎಂದು ವ್ಯವಸ್ಥೆಯನ್ನು ಟೀಕಿಸಿದರು.
ಈಗ ವ್ಯವಸ್ಥೆಯು ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕುವ ಹಂತಕ್ಕೂ ಬಂದು ನಿಂತಿದೆ. ಆದರೆ, ನ್ಯಾಯಮೂರ್ತಿಗಳು ಇದಕ್ಕೆ ಹೆದರಲ್ಲ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲದ ರೀತಿಯಲ್ಲಿ ಚುನಾವಣಾ ಆಯೋಗವು ಚುನಾವಣೆ ನಡೆಸಬೇಕು. ಅದು ಸಂಪೂರ್ಣವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಭ್ರಷ್ಟಾಚಾರ ಎಸಗಿರುವುದು ಗೊತ್ತಾದರೆ ಚಾಲ್ತಿಯಲ್ಲಿರುವ ಕಾಯ್ದೆ ಬಳಸಿಕೊಂಡು ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕು ಕೋಲಾರದಿಂದ ಆರಂಭವಾಗುತ್ತಿರುವ ವಿಶಿಷ್ಟವಾದ ಈ ಆಂದೋಲನಕ್ಕೆ ನಿರಂತರವಾಗಿ ಬೆಂಬಲಿಸುತ್ತೇನೆ ಎಂದರು.
ಸಮಾನ ಮನಸ್ಕರ ಸಂಘಟನೆಯ ಮುಖಂಡರಾದ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಸ್ವಾಭಿಮಾನಿ ಕೋಲಾರ ಆಂದೋಲನದ ಮೂಲಕ ಭ್ಪಷ್ಟರಹಿತವಾದ ಚುನಾವಣಾ ವ್ಯವಸ್ಥೆ ಬೇಕೆಂಬ ಕೂಗು ಕೋಲಾರದಿಂದಲೇ ಆರಂಭವಾಗುತ್ತಿರುವುದಕ್ಕೆ ಕಾರಣ ಕೋಲಾರದ ಜನ ಮೂಲತಃ ಸ್ವಾಭಿಮಾನಿಗಳಾಗಿರುವುದೇ ಕಾರಣ ಎಂದರು.
ಮುಖಂಡ ಶ್ರೀಕೃಷ್ಣ ಮಾತನಾಡಿ, ಚುನಾವಣಾ ವ್ಯವಸ್ಥೆಯಲ್ಲಿ ಹಣ ಪಡೆದವರನ್ನು ಮತ್ತು ನೀಡಿದವರನ್ನು ಮತದಾರರ ಪಟ್ಟಿಯಿಂದಲೇ ವಜಾಗೊಳಿಸುವಂತ ಕಾನೂನು ಜಾರಿಯಾಗಬೇಕೆಂದರು.
ಮುಖಂಡ ಯಲವಾರ ಸೊಣ್ಣೇಗೌಡ ಮಾತನಾಡಿ, ನ್ಯಾಯಮೂರ್ತಿಗಳ ಸಲಹೆ ಮೇರೆಗೆ ಸ್ವಾಭಿಮಾನಿ ಆಂದೋಲನವನ್ನು ತಾಲೂಕು, ಹೋಬಳಿ ಮತ್ತು ಗ್ರಾಮ ಪಂಚಾಯತ್, ಗ್ರಾಮಗಳ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಘೋಷಿಸಿದರು.
ಪತ್ರಕರ್ತ ಕೆ.ಎಸ್ ಗಣೇಶ್ ಮಾತನಾಡಿ, ಸ್ವಾತಂತ್ರ್ಯ ನಂತರದ ಚುನಾವಣಾ ರಾಜಕಾರಣದಲ್ಲಿ ಜನಪ್ರತಿನಿ„ಗಳು ಹೇಗೆ ಆಯ್ಕೆಯಾಗುತ್ತಿದ್ದರು ಈಗ ಯಾವ ಹಂತ ತಲುಪಿದೆ ಎಂಬುದನ್ನು ವಿವರಿಸಿ, ಭ್ರಷ್ಟವ್ಯವಸ್ಥೆಯ ಬದಲಾವಣೆಯು ಜನನಾಯಕ, ಅ„ಕಾರಿ, ಆಡಳಿತ ವ್ಯವಸ್ಥೆಯಿಂದ ಕಾಯ್ದೆ ಕಾನೂನುಗಳಿಂದ ಸಾಧ್ಯವಾಗುವುದಿಲ್ಲ, ಜನಸಾಮಾನ್ಯ ಮನಸ್ಸು ಮಾಡಿದರೆ ಬದಲಾವಣೆ ತರಲು ಸಾಧ್ಯ, ಈ ಆಂದೋಲನ ದೇಶವ್ಯಾಪಿಯಾಗಲಿ ಎಂದು ಆಶಿಸಿದರು.
ಜನವಾದಿ ವಿ.ಗೀತಾ ಮಾತನಾಡಿ, ಸ್ವಾಭಿಮಾನಿ ಆಂದೋಲನ ವೇದಿಕೆ ಆರಂಭಿಸುವುದಲ್ಲ ಇದರಲ್ಲಿ ಭಾಗವಹಿಸುವವರು ಪ್ರಾಮಾಣಿಕತೆಯಿಂದ ನಡೆದುಕೊಂಡಾಗ ಮಾತ್ರವೇ ಹೋರಾಟಕ್ಕೆ ಅರ್ಥ ಬರುತ್ತದೆ ಇಲ್ಲವಾದರೆ ನಂಬಿಕೆ ಕಳೆದುಕೊಳ್ಳುತ್ತದೆಯೆಂದು ಎಚ್ಚರಿಸಿದರು.
ಡಾ.ಉದಯಕುಮಾರ್, ಜೆಪಿ ವೇದಿಕೆ ದಯಾನಂದ್, ರೆಡ್ಕ್ರಾಸ್ ಛೇರ್ಮನ್ ಗೋಪಾಲಕೃಷ್ಣ, ನಗರಸಭೆ ಮಾಜಿ ಸದಸ್ಯ ಸಲ್ಲಾವುದ್ದೀನ್ ಬಾಬು, ಅಬ್ಬಣಿ ಶಿವಪ್ಪ, ಗಾಂಧಿನಗರ ನಾರಾಯಣಸ್ವಾಮಿ, ಟಿ.ವಿಜಿಕುಮಾರ್, ವಕೀಲ ಸತೀಶ್ ಮುಂತಾದವರು ಮಾತನಾಡಿದರು.