‘ಬೇಡರ ಕಣ್ಣಪ್ಪ’ ಚಿತ್ರದ ಪೋಸ್ಟರ್ ಟ್ವೀಟ್ ಮಾಡಿ ನಿರ್ದೇಶಕಿ ಲೀನಾ ಮಣಿಮೇಖಲೈಗೆ ನಟ ಕಿಶೋರ್ ಪರೋಕ್ಷ ಬೆಂಬಲ
ಬೆಂಗಳೂರು, ಜು.7: ‘ಕಾಳಿ ದೇವಿ’ ಸಿಗರೇಟ್ ಸೇದುತ್ತಿರುವ ರೀತಿಯಲ್ಲಿ ಸಾಕ್ಷ್ಯ ಚಿತ್ರವೊಂದರ ಪೋಸ್ಟರ್ನಲ್ಲಿ ಬಿಂಬಿಸಿರುವ ನಿರ್ದೇಶಕಿ ಲೀನಾ ಮಣಿಮೇಖಲೈಗೆ ನಟ ಕಿಶೋರ್ ಪರೋಕ್ಷ ಬೆಂಬಲ ನೀಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಡಾ.ರಾಜ್ಕುಮಾರ್ ಅಭಿನಯದ ‘ಬೇಡರ ಕಣ್ಣಪ್ಪ’ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಕಿಶೋರ್, ನನ್ನ ದೇವರು, ನನ್ನ ಭಕ್ತಿ, ನನ್ನ ನೈವೇದ್ಯಗಳು ನನ್ನ ಹಕ್ಕು, ಅದು ನನ್ನ ನಾಡಿನ ಸೌಂದರ್ಯ, ನನ್ನ ನಾಡಿನ ಶಕ್ತಿ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ಗೆ ನೆಟ್ಟಿಗರಿಂದ ಪರ, ವಿರುದ್ಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
'ದೇವರನ್ನು ಪೂಜಿಸುವಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಲ್ಪನೆ ಇರುವಂತೆ ಕಾಳಿ ಮಾತೆಯನ್ನು ಮಾಂಸಾಹಾರಿ ಮತ್ತು ಮದ್ಯ ಸೇವಿಸುವ ದೇವರಾಗಿ ಊಹಿಸುವ ಹಕ್ಕು ನನಗಿದೆ' ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ನೀಡಿರುವ ಹೇಳಿಕೆಯೂ ಸಾಕಷ್ಟು ವಿವಾದಕ್ಕೀಡಾಗಿದ್ದು, ಅವರ ವಿರುದ್ಧ ಎಫ್ಐಆರ್ಗಳು ದಾಖಲಾಗಿವೆ. ಈ ಬೆಳವಣಿಗೆ ಬೆನ್ನಲ್ಲೆ ನಟ ಕಿಶೋರ್, ಲೀನಾ ಅವರನ್ನು ಪರೋಕ್ಷವಾಗಿ ಬೆಂಬಲಿಸುವಂತೆ ಟ್ವೀಟ್ ಮಾಡಿದ್ದಾರೆ.
ಲೀನಾ ಹಾಕಿರುವ ಪೋಸ್ಟರ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆನಡಾದ ಆಗಾ ಖಾನ್ ವಸ್ತುಸಂಗ್ರಹಾಲಯವು ಪೋಸ್ಟರ್ ಅನ್ನು ಹಿಂಪಡೆದಿದೆ. ಅಲ್ಲದೆ, ಟ್ವೀಟರ್ ಸಂಸ್ಥೆಯೂ ವಿವಾದಾತ್ಮಕ ಪೋಸ್ಟರ್ ಅನ್ನು ತನ್ನ ಜಾಲತಾಣದಿಂದ ತೆಗೆದು ಹಾಕಿದೆ ಎಂದು ತಿಳಿದು ಬಂದಿದೆ.
ನನ್ನ ದೇವರು, ನನ್ನ ಭಕ್ತಿ , ನನ್ನ ನೈವೇದ್ಯಗಳು ನನ್ನ ಹಕ್ಕು, ಅದು ನನ್ನ ನಾಡಿನ ಸೌಂದರ್ಯ, ನನ್ನ ನಾಡಿನ ಶಕ್ತಿ. https://t.co/soOufencuC
— Kishore (@actorkishore) July 6, 2022