ಕಳಸ: ಮರ ಬಿದ್ದು ಯುವತಿ ಸ್ಥಳದಲ್ಲೇ ಮೃತ್ಯು
ಕಳಸ, ಜು.10: ತಾಲೂಕು ವ್ಯಾಪ್ತಿಯ ಹೊರನಾಡು ಗ್ರಾಮದಲ್ಲಿ ಅಡಿಕೆ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮರ ಬಿದ್ದು ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ರವಿವಾರ ನಡೆದಿದೆ.
ಮೃತ ಯುವತಿಯನ್ನು ದಾವಣಗೆರೆ ಮೂಲಕ ಹರಪನಹಳ್ಳಿಯ ಪ್ರಿಯಾಂಕಾ (20) ಎಂದು ಗುರುತಿಸಲಾಗಿದ್ದು,ತನ್ನ ಕುಟುಂಬದೊಂದಿಗೆ ಕೂಲಿ ಕೆಲಸ ಅರಸಿ ಹೊರನಾಡು ಗ್ರಾಮಕ್ಕೆ ಬಂದಿದ್ದ ಈಕೆ ಸ್ಥಳೀಯ ಅಡಿಕೆ ತೋಟದ ಮಾಲಕರೊಬ್ಬರ ತೋಟದಲ್ಲಿ ಕೆಲಸ ಮಾಡಿಕೊಂಡಿರುತ್ತಿದ್ದಳು. ಎಂದಿನಂತೆ ರವಿವಾರವೂ ಕೂಲಿ ಕೆಲಸಕ್ಕೆ ಬಂದಿದ್ದ ಪ್ರಿಯಾಂಕ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕೆಯ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿದೆ.
ಮರ ಯುವತಿ ಕಾಲಿಗೆ ಬಿದ್ದಿದೆಯಾದರೂ ಕಾಲಿಗೆ ಪೆಟ್ಟಾಗಿ ಆಕೆ ನೆಲಕ್ಕೆ ಬೀಳುವ ಸಂದರ್ಭದಲ್ಲಿ ಆಕೆಯ ತಲೆ ಕಲ್ಲೊಂದಕ್ಕೆ ರಭಸವಾಗಿ ತಾಗಿದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಸ್ರಾವ ಆಗಿದೆ. ತೀವ್ರ ರಕ್ತ ಸ್ರಾವದಿಂದಾಗಿ ಪ್ರಿಯಾಂಕಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಕಳಸ ತಹಶೀಲ್ದಾರ್ ನಂದಕುಮಾರ್, ಪಿಎಸ್ಸೈ ಹರ್ಷವರ್ಧನ್, ಎಎಸ್ಸೈ ಮೋಹನ್ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.