ಸೋನಿಯಾ, ಇಂದಿರಾ ಗಾಂಧಿ ಹೆಸರಲ್ಲಿ 3-4 ತಲೆಮಾರಿಗೆ ಆಗುವಷ್ಟು ನಾವು ಮಾಡಿಕೊಂಡಿದ್ದೇವೆ: ರಮೇಶ್ ಕುಮಾರ್
ರಮೇಶ್ ಕುಮಾರ್ -ಮಾಜಿ ಸ್ಪೀಕರ್
ಬೆಂಗಳೂರು: 'ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರ ಹೆಸರನ್ನು ಹೇಳಿಕೊಂಡು 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ. ಈಗ ನಮಗೆ ಅದರ ಋಣ ತೀರಿಸುವ ಸಮಯ ಬಂದಿದೆ' ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾರ್ಯರ್ತರಿಗೆ ಕಿವಿಮಾತು ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರನ್ನು ಈಡಿ ವಿಚಾರಣೆಗೆ ಸಮನ್ಸ್ ನೀಡಿದ್ದನ್ನು ಖಂಡಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ರಮೇಶ್ ಕುಮಾರ್, 'ಈ ದೇಶ ಉಳಿಯಬೇಕು ಎಂದರೆ ಕಾಂಗ್ರೆಸ್ ಉಳಿಯಲೇಬೇಕು. ಎಲ್ಲಾ ಸಣ್ಣ ವಿಚಾರವನ್ನು ಬದಿಗೊತ್ತೋಣ, ಚಾಡಿಕೋರತನವನ್ನು ಬಿಡೋಣ, ನೀಚತಣವನ್ನು ಬಿಡೋಣ, ಕಾಂಗ್ರೆಸ್ ಅನ್ನು ಬಲಗೊಳಿಸಬೇಕು, ಸೋನಿಯಾಗಾಂಧಿ ಅವರಿಗೆ ಶಕ್ತಿ ತುಂಬ ಬೇಕು' ಎಂದು ಕರೆ ನೀಡಿದರು.
'ನನಗೆ ಒಂದು ಸಮನ್ಸ್ ಕೊಟ್ಟಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಇಡೀ ದೇಶಾದ್ಯಂತ ನನ್ನ ಪರವಾಗಿ ನಿಂತಿದ್ದಾರೆ, ನಾನು ಅನುಭವಿಸಿದ ಕಷ್ಟಕ್ಕೆ, ನನ್ನ ಮಗ ಅನುಭವಿಸಿದ ಕಷ್ಟಕ್ಕೆ, ನನ್ನ ಗಂಡನ ಪ್ರಾಣ ಕಳೆದುಕೊಂಡಿದ್ದಕ್ಕೆ ಈ ದೇಶದ ಜನ ಋಣ ತೀರಿಸಿಕೊಳ್ಳುತ್ತಿದ್ದಾರೆ ಎಂದು ನೈತಿಕವಾಗಿ ಸೋನಿಯಾ ಗಾಂಧಿ ಅವರಿಗೆ ಸಮಾಧಾನ ಆದರೆ ಆಗ ಮಾತ್ರ ನಾವು ತಿನ್ನುವ 2 ಹೊತ್ತಿನ ಊಟ ಸಾರ್ಥಕ ಆಗುತ್ತದೆ' ಎಂದು ಹೇಳಿದ್ದಾರೆ.
'ಆರೆಸ್ಸೆಸ್ ನವರು, ಹಿಂದೂ ಮಹಾಸಭಾದವ್ರು, ಜನಸಂಘದವ್ರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಿದ್ದರಾ' ಎಂದು ಇದೇ ವೇಳೆ ಪ್ರಶ್ನೆ ಮಾಡಿದ್ದಾರೆ.